ಬೀದರ್: ತಹಶೀಲ್ದಾರ್ ದಿಲ್ ಶಾದ್ ಅಲಿ ಮಹತ್ ಅವರ ಡಿಜಿಟಲ್ ಸಹಿ ನಕಲು ಮಾಡಿ ಒಬ್ಬರ ಹೆಸರಿನಲ್ಲಿದ್ದ ಜಮೀನಿನ ಪಹಣಿಗಳನ್ನು ಮತ್ತೊಬ್ಬರ ಹೆಸರಿಗೆ ವರ್ಗಾವಣೆ ಮಾಡಿದ ಘಟನೆ ನಡೆದಿದ್ದು, ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೀದರ್ ತಾಲೂಕಿನ ನಂದಗಾಂವ ಗ್ರಾಮದ ಜಗನ್ನಾಥ ಎಂಬವರ ಹೆಸರಿನಲ್ಲಿದ್ದ 8 ಎಕರೆ 13 ಗುಂಟೆ ಜಮೀನನ್ನು ಮೊಹಮದ್ ಇಸ್ಮಾಯಿಲ್ ಎಂಬುವರ ಹೆಸರಿಗೆ ವರ್ಗಾವಣೆ ಮಾಡಲಾಗಿದೆ. ತಹಶೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕರಾಗಿದ್ದ ಸೃಜನ್ ಮತ್ತು ಅಂಬರೀಶ್ ಅವರು ತಹಶೀಲ್ದಾರ್ ದಿಲ್ ಶಾದ್ ಅವರ ಸಹಿಯನ್ನು ನಕಲು ಮಾಡಿ ಜಮೀನು ವರ್ಗಾವಣೆ ಮಾಡಿದ್ದಾರೆ.
ಡಿಜಿಟಲ್ ಸಹಿ ಪ್ರಿಂಟ್ ತೆಗೆದುಕೊಂಡು ನಕಲು ಮಾಡಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿದೆ. ಅಲ್ಲದೆ, ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.