ತೆರೆದ ಕೊಳವೆ ಬಾವಿ ಮುಚ್ಚಿದರೆ ಪ್ರೋತ್ಸಾಹಧನ ನೀಡುತ್ತೇನೆ; ರೈತನೋರ್ವನ ಘೋಷಣೆ

ಕೊಪ್ಪಳ: ತೆರೆದ ಕೊಳವೆ ಬಾವಿಗೆ ಮಕ್ಕಳು ಬಿದ್ದು ಸಂಭವಿಸುತ್ತಿರುವ ದುರಂತ ಪ್ರಕರಣ ರಾಜ್ಯದಲ್ಲಿ ಪದೇ ಪದೇ ನಡೆಯುತ್ತಲೇ ಇರುತ್ತವೆ. ಆದರೂ ಜನರು ಎಚ್ಚೆತ್ತುಕೊಂಡು ಕೊಳವೆ ಬಾವಿಗಳನ್ನು ಮುಚ್ಚುವ ಕೆಲಸಕ್ಕೆ ಮುಂದಾಗಿಲ್ಲ. ಎರಡು ದಿನಗಳ ಹಿಂದೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ 2 ವರ್ಷದ ಸಾತ್ವಿಕ್ ಎಂಬ ಮಗು ಕೊಳವೆ ಬಾವಿಗೆ ಬಿದ್ದು, 20 ಗಂಟೆಗಳ ಕಾಲ ನಡೆದ ಸತತ ಕಾರ್ಯಾಚರಣೆ ಬಳಿಕ ಮಗುವನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ.

ಈ ಘಟನೆ ಬೆನ್ನಲ್ಲೇ ರೈತರೊಬ್ಬರು ತೆರೆದ ಕೊಳವೆ ಬಾವಿ ಮುಚ್ಚುವಂತೆ ಸಂದೇಶ ರವಾನಿಸಿದ್ದಾರೆ. ರಾಜ್ಯದಲ್ಲಿ ತೆರೆದ ಕೊಳವೆ ಬಾವಿಗಳನ್ನು ಯಾರಾದರೂ ಮುಚ್ಚಿದರೆ ಅವರಿಗೆ ತಾನು ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ನಿವಾಸಿ ರೈತ ಶಿವಣ್ಣ ಚಳ್ಳಕೇರಿ, ರಾಜ್ಯದಲ್ಲಿ ಎಲ್ಲಿಯಾದರೂ ತೆರೆದ ಕೊಳವೆ ಬಾವಿಗಳು ಕಂಡುಬಂದರೆ, ಅವುಗಳನ್ನು ಮುಚ್ಚಿ ಎಂದು ಮನವಿ ಮಾಡಿದ್ದಾರೆ. ಅಲ್ಲದೇ ಯಾರಾದರೂ ಇಂತಹ ಕೊಳವೆ ಬಾವಿಗಳನ್ನು ಮುಚ್ಚಿದರೆ ಅವರಿಗೆ 500 ರೂಪಾಯಿ ಪ್ರೋತ್ಸಾಹಧನ ಕೊಡುತ್ತೇನೆ. ಅದಕ್ಕಾಗಿ ಬ್ಯಾಂಕ್ ನಲ್ಲಿ 1 ಲಕ್ಷ ಹಣ ಇಡಲು ಮುಂದಾಗಿದ್ದಾಗಿ ತಿಳಿಸಿದ್ದಾರೆ.

ಬಾಯ್ತೆರೆದು ನಿಂತಿರುವ ಕೊಳವೆ ಬಾವಿಗಳನ್ನು ಮುಚ್ಚಿ ಅದರ ಫೋಟೊ ಹಾಗೂ ದೃಢೀಕರಣ ಪತ್ರ ನೀಡಿದರೆ ಅವರಿಗೆ ಹಣ ನೀಡುತ್ತೇನೆ ಎಂದು ಘೋಷಿಸಿದ್ದಾರೆ. ಬತ್ತಿರುವ ಕೊಳವೆ ಬಾವಿ, ನೀರಿಲ್ಲದ ಕೊಳವೆ ಬಾವಿಗಳನ್ನು ಮುಚ್ಚುವ ಕೆಲಸವನ್ನು ಸ್ವತ: ಬಾವಿ ಕೊರೆಸಿದವರು ಅಥವಾ ಸ್ಥಳೀಯ ಅಧಿಕಾರಿಗಳು ಮಾಡಬೇಕು. ಕೊಳವೆ ಬಾವಿಯಿಂದ ಸಾಲು ಸಾಲು ಅಪಾಯಗಳು ಸಂಭವಿಸಿದರೂ ಜನ ಎಚ್ಚತ್ತುಕೊಳ್ಳುತ್ತಿಲ್ಲ. ಆದರೆ ರೈತ ಶಿವಣ್ಣನ ಈ ಕಾರ್ಯವನ್ನು ಮಾತ್ರ ನಿಜಕ್ಕೂ ಶ್ಲಾಘಿಸಲೇಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read