ಕೊಪ್ಪಳ: ಮೂರನೇ ಪತ್ನಿಯನ್ನು ಹತ್ಯೆಗೈದು ಶವವನ್ನು ಮೂಟೆ ಕಟ್ಟಿ ಲಗೇಜ್ ಎಂದು ಬಸ್ ನಲ್ಲಿ ಕಳುಹಿಸಿ ಪರಾರಿಯಾಗಿದ್ದ ಪತಿ ಮಹಾಶಯನನ್ನು 23 ವರ್ಷಗಳ ಬಳಿಕ ಬಂಧಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ರಾಯಚೂರಿನಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರು ತಿಂಗಳ ಹಿಂದೆ ಸ್ವಗ್ರಾಮಕ್ಕೆ ಬಂದಿದ್ದ ಹಂತಕನ ಜಾಅಡು ಹಿಡಿದ ಪೊಲೀಸರು ಇದೀಗ ರಾಯಚೂರಿನ ಮಾನ್ವಿಯಲ್ಲಿ ಬಂಧಿಸಿದ್ದಾರೆ. ಬಂಧಿತನನ್ನು 75 ವರ್ಷದ ಹುಸೇನಪ್ಪ ಎಂದು ಗುರುತಿಸಲಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರಿಯ ಸಹಾಯಕನಾಗಿದ್ದ ಹುಸೇನಪ್ಪನಿಗೆ ಮೊದಲ ಪತ್ನಿ ಸಾವನ್ನಪ್ಪಿದ್ದರು. ಬಳಿಕ ಎರಡನೇ ಮದುವೆಯಾಗಿದ್ದ. ಆಕೆ ಜಗಳವಾಡಿ ಪತಿಯನ್ನು ಬಿಟ್ಟು ಹೋಗಿದ್ದಳು. ಬಳಿಕ ತಾನು ಸರ್ಕಾರಿ ನೌಕರ ಎಂದು ಹೇಳಿಕೊಂಡು ಕೊಪ್ಪಳ ತಾಲೂಕಿನ ಇಂದಗಿ ನಿವಾಸಿ ರೇಣುಕಾ ಎಂಬಾಕೆಯನ್ನು ಮೂರನೇ ಮದುವೆಯಾಗಿದ್ದ. ಮದುವೆ ಬಳಿಕ ಗಂಗಾವತಿಯ ಲಕ್ಷ್ಮೀ ಕ್ಯಾಂಪ್ ನಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದ.
23 ವರ್ಷಗಳ ಹಿಂದೆ ಹೆಂಡತಿಯನ್ನು ಕೊಚ್ಚಿ ಕೊಲೆ ಮಾಡಿದ್ದ. ಬಳಿಕ ಶವವನ್ನು ಲಗೇಜ್ ಎಂದು ಕಂಪ್ಲಿ ಬಸ್ ನಲ್ಲಿ ಕಳುಹಿಸಿದ್ದ. ಬಳಿಕ ನಾಪತ್ತೆಯಾಗಿದ್ದ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಆರೋಪಿ ಸಿಕ್ಕಿರಲಿಲ್ಲ. ಆರು ತಿಂಗಳ ಹಿಂದೆ ಸ್ವಗ್ರಾಮಕ್ಕೆ ಬಂದಿದ್ದ ಆರೋಪಿ ಜಾಡು ಹಿಡಿದ ಪೊಲೀಸರು ತನಿಖೆ ಬಳಿಕ ಇದೀಗ ಬಂಧಿಸಿದ್ದಾರೆ.