ಬೆಂಗಳೂರು: ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳ ಚಿನ್ನಾಭರಣ, ಹಣ ಕದ್ದು ಪರಾರಿಯಾಗಿದ್ದ ಕಳ್ಳ 7 ವರ್ಷಗಳ ಬಳಿಕ ಸಿಕ್ಕಿಬಿದ್ದಿದ್ದಾನೆ.
ಏಳು ವರ್ಷಗಳ ಹಿಂದೆ ಸ್ವಾಮೀಜಿಗಳ ಬಳಿ ಇದ್ದ ಚಿನ್ನ, ಹಣಗಳನ್ನು ಕದ್ದು ಕಳ್ಳ ಪರಾರಿಯಾಗಿದ್ದ. ಇದೀಗ ಪ್ರಕರಣ ಸಂಬಂಧ ಉತ್ತರಾಖಂಡದ ನೈನಿತಾಲ್ ಮೂಲದ ಜಿತೇಂದ್ರ ಎಂಬ ಆರೋಪಿಯನ್ನು ಬಂಧಿಸಲಾಗಿದೆ
2018ರಲ್ಲಿ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ರೈಲಿನಲ್ಲಿ ಬಾಗಲಕೋಟೆಯಿಂದ ಅರಸೀಕೆರೆಗೆ ತೆರಳುತ್ತಿದ್ದರು. ಈ ವೇಳೆ ಲೆದರ್ ಬ್ಯಾಗ್ ನಲ್ಲಿ ಚಿನ್ನಾಭರಣ, ಹಣ ಇಟ್ಟು ಸ್ವಾಮೀಜಿ ನಿದ್ದೆಗೆ ಜಾರಿದ್ದರು. ತಡರಾತ್ರಿ ಎಚ್ಚರವಾದಾಗ ಬ್ಯಾಗ್ ನೋಡಿದರೆ ಚಿನ್ನ, ಹಣ ಕಳುವಾಗಿತ್ತು. 250 ಗ್ರಾಂ ಚಿನ್ನದ ಸರ, ಗೌರಿಶಂಕರ ರುದ್ರಾಕ್ಷಿ ಪದಕ, 50 ಗ್ರಾಂ ಎರಡು ಚಿನ್ನದ ಉಂಗುರ, 1.62 ಲಕ್ಷ ನಗದು ಹಣ ಕಳ್ಳತನವಾಗಿತ್ತು. ಈ ಬಗ್ಗೆ ಅರಸೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಏಳು ವರ್ಷಗಳ ಬಳಿಕ ಆರೋಪಿ ಜಿತೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಂಧನದಿಂದ 13 ಕೇಸ್ ಗಳು ಪತ್ತೆಯಾಗಿವೆ. ರೈಲಿನಲ್ಲಿ ಎಸಿ ಕೋಚ್ ಗಳಲ್ಲಿ ಶ್ರೀಮಂತ ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಎಂದು ತಿಳಿದುಬಂದಿದೆ.