ವಾರಾಣಸಿ: ಸುಲಭವಾಗಿ ದೇವರ ದರ್ಶನ, ಪೂಜೆ ಮಾಡಿಸುತ್ತೇವೆ ಎಂದು ಭಕ್ತರಿಂದ ವಸೂಲಿ ಮಾಡುತ್ತಿದ್ದ 21 ನಕಲಿ ಅರ್ಚಕರನ್ನು ಕಾಶಿ ವಿಶ್ವನಾಥ ದೇಗುಲದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸುಲಭವಾಗಿ ದೇವರ ದರ್ಶನ, ಪೂಜೆ ವ್ಯವಸ್ಥೆ ಮಾಡಿಸುತ್ತೇವೆ ಎಂದು ಭಕ್ತರಿಗೆ ನಂಬಿಸಿ, ಹಣ ಪಡೆಯುತ್ತಿದ್ದ ಹಾಗೂ ದೇವಾಲಯದ ಆವರಣದ ಬಳಿ ಅನುಚಿತವಾಗಿ ವರ್ತಿಸುತ್ತಿದ್ದ ಆರೋದ ಹಿನ್ನೆಲೆಯಲ್ಲಿ 21 ನಕಲಿ ಅರ್ಚಕರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಹಲವು ದಿನಗಳಿಂದ ದೂರು ಬಂದಿದ್ದವು. ಈ ಹಿನ್ನೆಲೆಯಲ್ಲಿ ದಶಾಶ್ವಮೇಧ ಹಾಗೂ ಚೌಕ ಪೊಲೀಸ್ ಠಾಣೆ ಪೊಲೀಸರನ್ನು ಒಳಗೊಂಡ ಜಂಟಿ ತಂಡವನ್ನು ರಚನೆ ಮಾಡಲಾಗಿತ್ತು. ತನಿಖೆ ವೇಳೆ ದಶಾಶ್ವಮೇಧ ಠಾಣೆ ಪೊಲೀಸರಿಗೆ 15 ಜನರು ಹಾಗೂ ಚೌಕ ಠಾಣೆ ಪೊಲೀಸರಿಗೆ 6 ಜನರು ನಕಲಿ ಪೂಜಾರಿಗಳು ಸಿಕ್ಕಿಬಿದ್ದಿದ್ದಾರೆ.
ದೇಗುಲದಲ್ಲಿ ನಮ್ಮ ತಂಡ ಕಾರ್ಯಾಚರಣೆ ಮುಂದುವರೆಸಿದೆ. ಇಂತಹ ನಕಲಿ ಅರ್ಚಕರನ್ನು ಮತ್ತಷ್ಟು ಜನರನ್ನು ಬಂಧಿಸಲಾಗುವುದು ಎಂದು ಎಸಿಪಿ ಮಾಹಿತಿ ನೀಡಿದ್ದಾರೆ.