ಬೆಂಗಳೂರು: ಹಿಂದಿ ಹೇರಿಕೆ ಖಂಡಿಸಿ ತಾಜ್ ವೆಸ್ಟೆಂಡ್ ಹೋಟೆಲ್ ಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನುಗ್ಗಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ತಾಜ್ ವೆಸ್ಟೆಂಡ್ ಹೋಟೆಲ್ ಗೆ ಅಕ್ರಮ ಪ್ರವೇಶ ಮಾಡಿದ ಆರೋಪದಲ್ಲಿ 41 ಕರವೇ ಕಾರ್ಯಕರ್ತರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರವೇ ಕರೆಕೊಟ್ಟಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ, ಹಿಂದಿ ಹೇರಿಕೆ ಖಂಡಿಸಿ, ದಬ್ಬಾಳಿಕೆ ಕ್ರಮ ಖಂಡಿಸಿ ಹೋರಾಟ ನಡೆಸಿದ್ದಕ್ಕೆ 41 ಕರವೇ ಕಾರ್ಯಕರ್ತರನ್ನು ಜೈಲಿಗಟ್ಟಲಾಗಿದೆ. ಇದನ್ನು ಖಂಡಿಸಿ ನಾಳೆ 31 ಜಿಲ್ಲೆಗಳಲ್ಲಿಯೂ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಬಲವಂತದ ಹಿಂದಿ ಹೇರಿಕೆಯನ್ನು ಕೂಡಲೇ ನಿಲ್ಲಿಸಬೇಕು. ನಮ್ಮ ತೆರಿಗೆ ಹಣವನ್ನು ಹಿಂದಿ ಭಾಷೆ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಕೂಡಲೇ ಕಾರ್ಯಕರ್ತರ ಮೇಲಿನ ಕೇಸ್ ಹಿಂಪಡೆಯಬೇಕು. ಕರವೇ ಕಾರ್ಯಕರ್ತರ ಮೇಲೆ ರೌಡಿಶೀಟ್ ಮಾಡ್ತೀರಾ? 78 ಲಕ್ಷ ಕಾರ್ಯಕರ್ತರು ದಂಗೆ ಏಳಬೇಕಾಗುತ್ತದೆ. ದಂಗೆ ಎದ್ದರೆ ಏನು ಮಾಡುತ್ತೀರಿ? ನಿಮ್ಮ ಜೈಲುಗಳಲ್ಲಿ 35 ಸಾವಿರವಷ್ಟೇ ಸಾಮರ್ಥ್ಯವಿರುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.