ಕಲಬುರಗಿ: ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದ ವ್ಯಕ್ತಿಯಿಂದಲೇ ಮಹಿಳೆಯ ಹತ್ಯೆಯಾಗಿದ್ದು, ಬಳಿಕ ಮೃತದೇಹವನ್ನು ಸುಟ್ಟು ಹಾಕಲಾಗಿದೆ ಎಂಬುದು ಬಯಲಾಗಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರದಲ್ಲಿ ಈ ಘಟನೆ ನಡೆದಿದೆ. ದೇವಿಭಾಯಿ ಕೊಲೆಯಾದ ಮಹಿಳೆ. ಪ್ರಕರಣ ಸಂಬಂಧ ಕಲಬುರಗಿ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸೋಮುಲು ಹಾಗೂ ಆಮು ಅಲಿಯಾಸ್ ಪಪ್ಪು ಬಂಧಿತ ಆರೋಪಿಗಳು.
ದೇವಿಭಾಯಿ ಹಾಗೂ ಸೋಮುಲು ಲಿವಿಂಗ್ ರಿಲೇಷನ್ ಶಿಪ್ ನಲ್ಲಿ ಇದ್ದರು. ತನ್ನ ಮಗಳ ಮದುವೆ ವಿಚಾರವಾಗಿ ದೇವಿಭಾಯಿ ಸೋಮುಲು ಜೊತೆ ಆಗಾಗ ಜಗಳವಾಡುತ್ತಿದ್ದಳು. ಜೂನ್ 1ರಂದು ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿ ಜಗಳವಾಗಿದೆ. ಊರಿಗೆ ಬಿಟ್ಟುಬರುತ್ತೇನೆ ಎಂದು ಸೋಮುಲು, ದೇವಿಭಾಯಿಯನ್ನು ಕಾರಿನಲ್ಲಿ ಕರೆದೊಯ್ದಿದ್ದ. ಹೀಗೆ ಕರೆದೊಯ್ದವನು ದೇವಿಭಾಯಿಯನ್ನು ಕೊಲೆ ಮಾಡಿದ್ದಾನೆ.
ಕೊಲೆ ಬಳಿಕ 10 ಗಂಟೆಗಳ ಕಾಲ ಕಾರಿನಲ್ಲಿಯೇ ಶವ್ ಇಟ್ಟುಕೊಂಡು ಓಡಾಡಿದ್ದಾನೆ. ಇದಕ್ಕೆ ಇನ್ನೋರ್ವ ಆರೋಪಿ ಕೂಡ ಸಾಥ್ ನೀಡಿದ್ದಾನೆ. ಸಾಕ್ಷ್ಯ ನಾಶಕ್ಕೆ ಲಾಡ್ಲಾಪುರ ನಿರ್ಜನ ಪ್ರದೇಶದಲ್ಲಿ ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿ ಪರಾರಿಯಗಿದ್ದಾರೆ. ಈ ಬಗ್ಗೆ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.