ಬೆಂಗಳೂರು: ಜಮ್ಮು-ಕಾಶ್ಮೀರದಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 28 ಜನರು ಬಲಿಯಾಗಿದ್ದು, ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಉಗ್ರರ ದಾಳಿಯನ್ನು ರಾಷ್ಟ್ರಾದ್ಯಂತ ಜನರು ತೀವ್ರವಾಗಿ ಖಂಡಿಸುತ್ತಿದ್ದಾರೆ. ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಹಲವು ರಾಷ್ಟ್ರದ ನಾಯಕರು ಖಂಡಿಸಿದ್ದಾರೆ. ಇದೇ ವೇಳೆ ಸಿನಿ ನಟ-ನಟಿಯರು, ಉದ್ಯಮಿಗಳು ಕೂಡ ಈ ಗಹ್ಟನೆಯನ್ನು ಖಂಡಿಸಿದ್ದು, ಭಯೋತ್ಪಾದಕರಿಗೆ ತಕ್ಕ ಶಾಸ್ತಿಯಾಗಲೇಬೇಕು ಎಂದು ಆಗ್ರಹಿಸಿದ್ದಾರೆ.
ಕನ್ನಡ ಚಿತ್ರರಂಗದ ನಟ ಶಿವರಾಜ್ ಕುಮಾರ್ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿದ್ದು, ಪ್ರಾಣ ತೆಗೆಯುವ ಹಕ್ಕು ಯಾರಿಗೂ ಇಲ್ಲ. ಇದು ಕ್ಷಮಿಸಲಸಾಧ್ಯವಾದ ಅಪರಾಧ ಎಂದಿದ್ದಾರೆ.
ಭಯೋತ್ಪಾದನೆ ಮಾಡುವ ಯಾರೇ ಆಗಿರಲಿ ಅವರು ಬದುಕಲು ಅನರ್ಹರು. ದಾಳಿಯಲ್ಲಿ ಮೃತಪಟ್ಟವರಿಗೆ ನನ್ನ ಅಂತಿಮ ನಮನ. ಮೃತರ ಕುಟುಂಬದವರಿಗೆ ನನ್ನ ಸಾಂತ್ವನ ಎಂದು ಟ್ವೀಟ್ ಮಾಡಿದ್ದಾರೆ.