ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 65ನೇ ಸಭೆಯಲ್ಲಿ ಸುಮಾರು 15,000+ ಕೋಟಿ ರೂ.ಮೊತ್ತದ ಹೂಡಿಕೆ ಯೋಜನೆಗಳಿಗೆ ಅನುಮೋದನೆ ದೊರೆತಿದೆ.
ಕರ್ನಾಟಕದಾದ್ಯಂತ ಈ ನೂತನ ಯೋಜನೆಗಳು ಕಾರ್ಯರೂಪಗೊಳ್ಳಲಿದ್ದು ಸುಮಾರು 5,200+ ಉದ್ಯೋಗಗಳು ಸೃಷ್ಟಿಯಾಗಲಿದೆ.
ಏರ್ ಕ್ರಾಫ್ಟ್ ಕಂಪನಿ ಏರ್ಬಸ್ನ ಎಚ್125 ಹೆಲಿಕಾಪ್ಟರ್ ಘಟಕ ಕರ್ನಾಟಕದಲ್ಲಿ ನಿರ್ಮಾಣವಾಗುತ್ತಿದೆ. ಕೋಲಾರದ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಹೆಲಿಕಾಪ್ಟರ್ ಅಸೆಂಬ್ಲಿ ಘಟಕ ನಿರ್ಮಾಣಗೊಳ್ಳಲಿದೆ. ಜಗತ್ತಿನಲ್ಲಿರುವ ಈ ರೀತಿಯ ಕೇವಲ 4 ಅಸೆಂಬ್ಲಿ ಘಟಕಗಳಲ್ಲಿ ಕರ್ನಾಟಕವೂ ಸ್ಥಾನ ಭದ್ರ ಮಾಡಿಕೊಳ್ಳುತ್ತಿದೆ.
ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ 153ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ, ಒಟ್ಟು 1,741.60 ಕೋಟಿ ರೂ. ಹೂಡಿಕೆ ಮೊತ್ತದ 63 ಹೊಸ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರ ಪರಿಣಾಮ 7,219 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ.
ದಕ್ಷಿಣ ಕನ್ನಡ, ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ವಿವಿಧ ಕೈಗಾರಿಕೆಗಳ ಸ್ಥಾಪನೆಯಾಗಲಿದೆ. 50 ಕೋಟಿ ರೂ.ಗಿಂತ ಅಧಿಕ ವೆಚ್ಚದ 7 ಮಹತ್ವದ ಯೋಜನೆಗಳು ಹಾಗೂ 53 ಮಧ್ಯಮ ಹೂಡಿಕೆಯ ಯೋಜನೆಗಳಿಗೂ ಅನುಮೋದನೆ ನೀಡಲಾಗಿದೆ.