ಶಬರಿಮಲೆ: ಶಬರಿಮಲೆ ಮಂಡಲ ಕಾಲದ ಯಾತ್ರೆ ಕೈಗೊಳ್ಳುವ ಭಕ್ತರಿಗೆ ನವೆಂಬರ್ 1ರಿಂದ ಆನ್ಲೈನ್ ಬುಕಿಂಗ್ ಆರಂಭಿಸಲಾಗಿದೆ.
ಒಂದು ದಿನದಲ್ಲಿ 70,000 ಭಕ್ತರಿಗೆ ಆನ್ಲೈನ್ ಬುಕಿಂಗ್ ಮತ್ತು 20,000 ಭಕ್ತರಿಗೆ ಸ್ಪಾಟ್ ಬುಕಿಂಗ್ ಮೂಲಕ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಅವಕಾಶ ನೀಡಲಾಗುವುದು. ಪಂಪಾದಲ್ಲಿ ಏಕಕಾಲದಲ್ಲಿ 10,000 ಜನರಿಗೆ ವಿಶ್ರಾಂತಿ ಸ್ಥಳಾವಕಾಶ ಕಲ್ಪಿಸಲು 10 ಜರ್ಮನ್ ಟೆಂಟ್ ಹಾಗೂ ಅರವಣ ಬಫರ್ ಸ್ಟಾಕ್ ಆಗಿ 50 ಲಕ್ಷ ಟಿನ್ ಗಳನ್ನು ಸಿದ್ಧಪಡಿಸಲು ಶಬರಿಮಲೆ ದೇವಾಲಯ ಸಮಿತಿ ಪರಿಶೀಲನಾ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ದೇವಸ್ವಂ ಸಚಿವ ವಿ.ಎನ್. ವಾಸವನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಹಾಗೂ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಪಟ್ಟಣಂತಿಟ್ಟ ಮತ್ತು ಇಡುಕ್ಕಿ ಜಿಲ್ಲಾಧಿಕಾರಿಗಳು ಭಾಗವಹಿಸಿದ್ದರು.
ಮಂಡಲ ಉತ್ಸವಕ್ಕಾಗಿ ನವೆಂಬರ್ 16ರಂದು ಸಂಜೆ 5 ಗಂಟೆಗೆ ಶಬರಿಮಲೆ ದೇವಾಲಯ ತೆರೆಯಲಾಗುವುದು. ಮಂಡಲ ಪೂಜೆ ಮುಗಿದ ನಂತರ ಡಿಸೆಂಬರ್ 27ರಂದು ರಾತ್ರಿ ದೇವಾಲಯ ಮುಚ್ಚಲಾಗುವುದು. ಮಕರ ಜ್ಯೋತಿ ಉತ್ಸವಕ್ಕೆ ಡಿಸೆಂಬರ್ 30ರಂದು ದೇವಾಲಯ ತೆರೆಯಲಾಗುವುದು.
