ಕಾರವಾರ: ಮೃತ ವ್ಯಕ್ತಿಯ ಹೆಸರಿನಲ್ಲಿರುವ ಜಮೀನಿನ ಮೇಲೆ ಕಿಸಾನ್ ಸಮ್ಮಾನ್, ಕೃಷಿ ಸಬ್ಸಿಡಿ, ಪ್ರವಾಹ ಪರಿಹಾರ ಸೇರಿದಂತೆ ಯಾವುದೇ ಸೌಲಭ್ಯಗಳು ಅವರ ವಾರಸುದಾರರಿಗೆ ಸಿಗುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಮಂಗಳವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮೃತರ ಹೆಸರಿನಲ್ಲಿರುವ ಜಮೀನಿಗೆ ಕಿಸಾನ್ ಸಮ್ಮಾನ್ ಕೊಡದಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಕೃಷಿ ಸಬ್ಸಿಡಿ, ಪ್ರವಾಹ ಪರಿಹಾರಕ್ಕೂ ಇದು ಅನ್ವಯವಾಗುತ್ತದೆ. ಹೀಗಾಗಿ ಮೃತರ ಹೆಸರಿನಲ್ಲಿರುವ ಆಸ್ತಿಯಲ್ಲಿ ವಾರಸುದಾರರ ಹೆಸರು ಸೇರಿಸಲು ರಾಜ್ಯದಲ್ಲಿ ಪೌತಿ ಖಾತೆ ಅಭಿಯಾನ ಕೈಗೊಂಡಿದ್ದು, ವಾರಸುದಾರರ ಹೆಸರಿಗೆ ಜಮೀನು ನೋಂದಣಿ ಮಾಡಿಕೊಡಲಾಗುತ್ತಿದೆ. ಸಹಕರಿಸದೆ ಇರುವ ಕುಟುಂಬದ ಆಸ್ತಿಯನ್ನು ಕೈಬಿಡುತ್ತೇವೆ. ಪೌತಿ ಖಾತೆ ಅಭಿಯಾನ ಮುಗಿದ ತಕ್ಷಣ ಪೋಡಿ ಮುಕ್ತ ಗ್ರಾಮ ಅಭಿಯಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಆನ್ಲೈನ್ ಮೂಲಕ ಅಂಗೈಯಲ್ಲಿ ಆಸ್ತಿ ದಾಖಲೆ ನೀಡಲು ಭೂ ಸುರಕ್ಷಾ ಯೋಜನೆ ರೂಪಿಸಲಾಗಿದೆ. ರಾಜ್ಯದಲ್ಲಿ 150 ವರ್ಷಗಳಷ್ಟು ಹಳೆಯ ದಾಖಲೆಗಳಿದ್ದು, ಅವು ಕಳೆದು ಹೋಗಬಾರದು, ಹೆಸರು ತಿದ್ದುಪಡಿ ಮಾಡಬಾರದು ಎಂಬ ಕಾರಣಕ್ಕೆ ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಶೇ. 33 ರಷ್ಟು ಸ್ಕ್ಯಾನಿಂಗ್ ಆಗಿದ್ದು, ಇದು ಪೂರ್ಣಗೊಂಡ ನಂತರ ಜನ ಮನೆಯಲ್ಲಿ ಕುಳಿತು ಅರ್ಜಿ ಹಾಕಿ ಆಸ್ತಿ ದಾಖಲೆ ಪಡೆಯಬಹುದು. ತಿಳಿಯದವರು ಅಟಲ್ ಜನಸ್ನೇಹಿ ಕೇಂದ್ರದಲ್ಲಿಯೂ ದಾಖಲೆ ಪಡೆಯಬಹುದಾಗಿದ್ದು, ನಂತರದಲ್ಲಿ ಬಾಪೂಜಿ ಕೇಂದ್ರದಲ್ಲಿಯೂ ದಾಖಲೆ ನೀಡಲಾಗುವುದು ಎಂದು ಹೇಳಿದ್ದಾರೆ.