ಬೆಂಗಳೂರು: ಜಮೀನು ವಿಚಾರವಾಗಿ ದುರುದ್ದೇಶ ಪೂರ್ವಕ ಆದೇಶ ಹೊರಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ವಾಸಂತಿ ಅಮರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬೆಂಗಳೂರಿನ ದಾಸನಪುರ ಹೋಬಳಿ ಹುಚ್ಚನಪಾಳ್ಯದಲ್ಲಿರುವ 10 ಎಕರೆ 20 ಗುಂಟೆ ಸರ್ಕಾರಿ ಜಮೀನಿಗೆ ಸಂಬಂಧಿಸಿ ದುರುದ್ದೇಶಪೂರ್ವಕ ಆದೇಶ ಹೊರಡಿಸಿದ ಆರೋಪದಲ್ಲಿ ಅಧಿಕಾರಿ ವಾಸಂತಿ ಅಮರ್ ವಿರುದ್ಧ ಹಲಸೂರುಗೇಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿಯಾಗಿ- 3 ಆಗಿ 2024ರಲ್ಲಿ ಕಾರ್ಯನಿರ್ವಹಿಸಿದ್ದ ವಾಸಂತಿ ಅಮರ್, ಹುಚ್ಚನಪಾಳ್ಯದಲ್ಲಿನ ಸರ್ವೇ ನಂಬರ್ 8ರಲ್ಲಿನ 10 ಎಕರೆ 20 ಗುಂಟೆ ಸರ್ಕಾರಿ ಜಮೀನಿಗೆ ಸಂಬಂಧಿಸಿದಂತೆ ಟ್ರಸ್ಟ್ ವೊಂದರ ಪರ ದುರುದ್ದೇಶ ಪೂರ್ವಕವಾಗಿ ಆದೇಶ ಹೊರಡಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಸರಕಾರಿ ಜಮೀನಿಗೆ ನಿಯಮಬಾಹಿರವಾಗಿ ಆದೇಶ ಹೊರಡಿಸಿದ ಹಿನ್ನೆಲೆ ಐಎಎಸ್ ಅಧಿಕಾರಿ ವಾಸಂತಿ ಅಮರ್ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಪ್ರಶಾಂತ್ ಖಾನಗೌಡ ಪಾಟೀಲ್ ಅವರು ಹಲಸೂರು ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರಿನ 48ನೇ ಎಸಿಎಂಎಂ ನ್ಯಾಯಾಲಯದಲ್ಲಿ ದಾಖಲಾಗಿದ್ದಂತ ಎನ್ಸಿಆರ್ ನಂಬರ್ 112/2025ರ ಅನುಸಾರ ತನಿಖೆ ಕೈಗೊಳ್ಳಲು ಕೋರಿದ್ದು, ಅದರಂತೆ ನ್ಯಾಯಾಲಯವು ತನಿಖೆ ಕೈಗೊಳ್ಳಲು ಆದೇಶಿಸಿದೆ. ಹೀಗಾಗಿ ಕೆಎಎಸ್ ಅಧಿಕಾರಿ ಪ್ರಶಾಂತ್ ಖಾನಗೌಡ ಪಾಟೀಲ್ ದೂರು ಆಧರಿಸಿ ಭಾರತೀಯ ನ್ಯಾಯ ಸಂಹಿತೆ 2023ರಡಿ 257 ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.