ಬಾಲಿವುಡ್ ಚಿತ್ರರಂಗದ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಜೊತೆಗೆ ‘ಓಂ ಶಾಂತಿ ಓಂ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದ ನಟ ಶ್ರೇಯಸ್ ತಲ್ಪಾಡೆ ನಾನು ಆರೋಗ್ಯದಿಂದ, ಖುಷಿಖುಷಿಯಾಗಿ ಜೀವಂತವಾಗಿದ್ದೇನೆ ಎಂದು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ಅವರು ಈ ರೀತಿಯ ಸ್ಪಷ್ಟನೆ ನೀಡಿದ್ದಕ್ಕೆ ಕಾರಣವೇನು ಎಂಬುದಕ್ಕೆ ಉತ್ತರ ಇಲ್ಲಿದೆ.
ಹೌದು, ಸೋಶಿಯಲ್ ಮೀಡಿಯಾದಲ್ಲಿ ಸೋಮವಾರ ಮಧ್ಯಾಹ್ನ ಕಾಣಿಸಿಕೊಂಡ ಪೋಸ್ಟ್ ಒಂದರಲ್ಲಿ ಶ್ರೇಯಸ್ ತಲ್ಪಾಡೆ ವಿಧಿವಶರಾಗಿದ್ದಾರೆ ಎಂದು ಹೇಳಲಾಗಿತ್ತು. ಕ್ಷಣಾರ್ಧದಲ್ಲಿಯೇ ಈ ಪೋಸ್ಟ್ ವೈರಲ್ ಆಗಿದ್ದು, ಇದು ಶ್ರೇಯಸ್ ತಲ್ಪಾಡೆ ಅವರ ಅಭಿಮಾನಿಗಳು, ಸ್ನೇಹಿತರಿಗೆ ಆಘಾತವನ್ನುಂಟು ಮಾಡಿದ್ದು, ಈ ಮಾಹಿತಿಯ ಸತ್ಯಾಸತ್ಯತೆ ತಿಳಿಯಲು ನಿರಂತರ ಪ್ರಯತ್ನ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿರುವ ಶ್ರೇಯಸ್ ತಲ್ಪಾಡೆ, ನಾನು ಆರೋಗ್ಯದಿಂದ, ಖುಷಿಖುಷಿಯಾಗಿ ಜೀವಂತವಾಗಿರುವೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಪೋಸ್ಟ್ ಹಾಕುವ ಕಿಡಿಗೇಡಿಗಳಿಗೆ ತಿಳಿ ಹೇಳಿರುವ ಅವರು, ನಾನು ಈ ಹಿಂದೆ ಹೃದಯಾಘಾತಕ್ಕೆ ಒಳಗಾದಾಗಿನಿಂದ ನನ್ನ ಪುತ್ರಿ ಸದಾ ಆತಂಕದಲ್ಲಿ ಇರುತ್ತಾಳೆ. ಇಂತಹ ಸುದ್ದಿ ಅವಳ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರಬಹುದು ಎಂಬುದನ್ನು ಸಾವಿನ ಸುಳ್ಳು ಸುದ್ದಿ ಹರಡುವವರಿಗೆ ತಿಳಿಯಲಿ ಎಂದಿದ್ದಾರೆ.