ಹುಬ್ಬಳ್ಳಿ: ರೌಡಿಗಳ ಅಟ್ಟಹಾಸ ಮಟ್ಟಹಾಕಲು ಹುಬ್ಬಳ್ಳಿ-ಧಾರವಾಡ ಪೊಲೀಸರು ಕಟ್ಟುನಿಟ್ಟಿನ ಹೊಸ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಮೂಲಕ ನಗರದಲ್ಲಿ ರೌಡಿಗಳ ಪುಂಡಾಟಕ್ಕೆ ಕಡಿವಾಣಹಾಕುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ ರೌಡಿಗಳ ಹಾವಳಿ ಹೆಚ್ಚುತ್ತಿದ್ದು, ಕೊಲೆ, ಸುಲಿಗೆ, ಹಫ್ತಾ ವಸೂಲಿ, ಅತ್ಯಾಚಾರ, ದರೋಡೆ, ಮೀಟರ್ ಬಡ್ಡಿದಂಧೆ ಪ್ರಕರಣಗಳು, ದಬ್ಬಾಳಿಕೆ, ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ರೌಡಿಗಳ ವಿರುದ್ಧ ಖಡಕ್ ಕ್ರಮಗಳನ್ನು ಪೊಲೀಸರು ಕೈಗೊಳ್ಳುತ್ತಿದ್ದಾರೆ.
ರೌಡಿ ಪುಂಡರನ್ನು ಗಡಿಪಾರು ಮಾಡುವ, ಗೂಂಡಾ ಕಾಯ್ದೆಯಡಿ ಜೈಲಿಗಟ್ಟುವ ಕೆಲಸಕ್ಕೆ ಪೊಲೀಸರು ಮುಂದಾಗಿದ್ದಾರೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ 1700 ರೌಡಿಶೀಟರ್ ಗಳಿದ್ದಾರೆ. ಇದು ಪೊಲೀಸರ ಸಂಖ್ಯೆಗಿಂತಲೂ ಹೆಚ್ಚು ಹೀಗಾಗಿ ಅಪರಾಧಸಂಖ್ಯೆಯೂ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ರೌಡಿಗಳಾದ ಸಾಗರ್ ಲಕ್ಕುಂಡಿ, ಸೈಂಟಿಸ್ಟ್ ಮಂಜ್ಯಾ, ದಾವೂದ್ ನದಾಫ್, ಲಕ್ಷ್ಮಣ ಎಂಬ ನಾಲ್ವರು ರೌಡಿಗಳ ಮೇಲೆ ಗುಮ್ದಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ನಾಲ್ವರನ್ನೂ ಕಲಬುರಗಿ, ಮೈಸೂರು ಸೇರಿದಂತೆ ಬೇರೆ ಬೇರೆ ಜೈಲಿಗೆ ಅಟ್ಟಲಾಗಿದೆ. ನಾಲ್ವರ ಮೇಲೂ ತಲಾ 10-15 ಕೇಸ್ ಗಳಿವೆ.
ಇನ್ನು ಕಳೆದ ಜನವರಿಯಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ 52 ರೌಡಿಗಳನ್ನು ಗಡಿಪಾರು ಮಾಡಲಾಗಿತ್ತು. ಇದೀಗ ಮತ್ತೆ 31 ರೌಡಿಗಳನ್ನು ಗಡಿಪಾರು ಮಾಡಲಗಿದೆ. ಈ ಮೂಲಕ ಕಳೆದ ಆರು ತಿಂಗಳಲ್ಲಿ ಒಟ್ಟು 83 ರೌಡಿಗಳನ್ನು ಗಡಿಪಾರು ಮಾಡಲಾಗಿದೆ.