ಬೆಂಗಳೂರು: ಮಾರ್ಗಸೂಚಿ ದರ ಆಧರಿಸಿ ಸ್ವಾಧೀನಾನುಭವ ಪತ್ರ, ಕಾಮಗಾರಿ ಪೂರ್ಣವಾದ ಪ್ರಮಾಣ ಪತ್ರ, ಕಟ್ಟಡ ನಿರ್ಮಾಣ ಲೈಸೆನ್ಸ್ ಮತ್ತು ನಕ್ಷೆ ಅನುಮೋದನೆಗೆ ನೆಲ ಬಾಡಿಗೆ ಸೇರಿದಂತೆ ಇತರೆ ಶುಲ್ಕಗಳನ್ನು ವಿಧಿಸಲು ಬಿಬಿಎಂಪಿಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶಕ್ಕೆ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದೆ.
ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಬಿಬಿಎಂಪಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ನೇತೃತ್ವದ ವಿಭಾಗೀಯ ಪೀಠದಿಂದ ಈ ಆದೇಶ ನೀಡಲಾಗಿದೆ.
ಇದರಿಂದಾಗಿ ಮಾರ್ಗಸೂಚಿ ದರ ಆಧರಿಸಿ ಸ್ವಾಧೀನಾನುಭವ ಪತ್ರ, ಕಾಮಗಾರಿ ಪೂರ್ಣಗೊಂಡ ಪ್ರಮಾಣ ಪತ್ರ, ನಕ್ಷೆ ಅನುಮೋದನೆಗೆ ನೆಲ ಬಾಡಿಗೆ ಸೇರಿ ಇತರೆ ಶುಲ್ಕಗಳನ್ನು ವಿಧಿಸಲು ಬಿಬಿಎಂಪಿಗೆ ಅವಕಾಶ ದೊರೆತಿದೆ.
ಆದರೆ, ಮೇಲ್ಮನವಿ ಸಂಬಂಧ ತೀರ್ಪು ಬಿಬಿಎಂಪಿ ವಿರುದ್ಧವಾಗಿ ಬಂದರೆ ಆಗ ಶುಲ್ಕ ರೂಪದಲ್ಲಿ ಸಂಗ್ರಹಿಸಿದ ಮೊತ್ತವನ್ನು ಬಿಬಿಎಂಪಿ ಮರುಪಾವತಿಸಬೇಕಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಹಲವು ಶುಲ್ಕಗಳನ್ನು ವಿಧಿಸಲು ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಇತರೆ ಕೆಲವು ಕಾನೂನು ತಿದ್ದುಪಡಿ ಕಾಯ್ದೆಗೆ 2021 ಮತ್ತು 2023 ರಲ್ಲಿ ತರಲಾಗಿದ್ದ ತಿದ್ದುಪಡಿಗಳನ್ನು ರದ್ದುಗೊಳಿಸಿ 2025 ಜೂನ್ 5 ರಂದು ಹೈಕೋರ್ಟ್ ಏಕ ಸದಸ್ಯ ಪೀಠದಿಂದ ಮಹತ್ವದ ತೀರ್ಪು ನೀಡಲಾಗಿತ್ತು. ಈ ತೀರ್ಪನ್ನು ಬಿಬಿಎಂಪಿ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿತ್ತು.