ಕೇವಲ ಒಂದು ಗಂಟೆಯಲ್ಲೇ ಪಾಸ್ಪೋರ್ಟ್ ಪಡೆದುಕೊಂಡ ಕ್ರಿಕೆಟರ್; ಕೇಂದ್ರ ವಿದೇಶಾಂಗ ಸಚಿವಾಲಯದ ಕಾರ್ಯಕ್ಕೆ ಹೈಕೋರ್ಟ್ ಮೆಚ್ಚುಗೆ

ತಮ್ಮ ವಿರುದ್ಧ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಕ್ಲಿಯರೆನ್ಸ್ ಹಾಗೂ ವೀಸಾ ಸಿಗದ ಕಾರಣಕ್ಕೆ ಕ್ರಿಕೆಟ್ ಆಡಲು ಇಂಗ್ಲೆಂಡ್ ಗೆ ತೆರಳಲು ಸಂಕಷ್ಟ ಎದುರಿಸುತ್ತಿದ್ದ ರಣಜಿ ಆಟಗಾರ ಕೆ.ಸಿ. ಕಾರಿಯಪ್ಪಗೆ ಹೈಕೋರ್ಟ್ ಮಧ್ಯ ಪ್ರವೇಶದಿಂದ ನಿರಾಳತೆ ದೊರೆತಿದೆ. ನ್ಯಾಯಾಲಯದ ಸೂಚನೆ ಮೇರೆಗೆ ಕೇಂದ್ರ ಸರ್ಕಾರದ ಪರ ವಕೀಲರು ನೀಡಿದ್ದ ಭರವಸೆಯಂತೆ ಪೊಲೀಸ್ ಕ್ಲಿಯರೆನ್ಸ್ ಸಿಕ್ಕ ಕೇವಲ 60 ನಿಮಿಷಗಳಲ್ಲೇ ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿ ವೀಸಾ ಒದಗಿಸಿಕೊಟ್ಟಿದೆ.

ಪ್ರಕರಣದ ವಿವರ: ವಿವಾಹವಾಗುವುದಾಗಿ ನಂಬಿಸಿ ತಮ್ಮನ್ನು ಲೈಂಗಿಕವಾಗಿ ಬಳಸಿಕೊಂಡು ಬಳಿಕ ಮೋಸ ಮಾಡಿದ್ದಾರೆ ಎಂದು ಯುವತಿಯೊಬ್ಬರು ಕ್ರಿಕೆಟರ್ ಕೆ.ಸಿ. ಕಾರಿಯಪ್ಪ ವಿರುದ್ಧ ಬೆಂಗಳೂರಿನ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಪೊಲೀಸರು, ಪಾಸ್ಪೋರ್ಟ್ ವಶಪಡಿಸಿಕೊಂಡ ಕಾರಣಕ್ಕೆ ಕೆ.ಸಿ. ಕಾರಿಯಪ್ಪ ವಿದೇಶ ಪ್ರಯಾಣಕ್ಕೆ ನಿರ್ಬಂಧ ವಿಧಿಸಲಾಗಿತ್ತು.

ಇದರ ಮಧ್ಯೆ ಕೆ.ಸಿ. ಕಾರಿಯಪ್ಪ, ಕ್ರಿಕೆಟ್ ಆಡಲು ಇಂಗ್ಲೆಂಡ್ ಗೆ ತೆರಳಬೇಕಿದ್ದ ಕಾರಣ ಪೊಲೀಸ್ ಕ್ಲಿಯರೆನ್ಸ್ ಸಿಗದೆ ತಮಗೆ ಅಡ್ಡಿಯಾಗುತ್ತಿದೆ ಎಂದು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠದ ವಿಚಾರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪರ ವಕೀಲರು ಪೋಲಿಸ್ ಕ್ಲಿಯರೆನ್ಸ್ ಸಿಕ್ಕ 60 ನಿಮಿಷಗಳಲ್ಲೇ ವೀಸಾ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದು ಅದರಂತೆ ಈಗ ಕಾರಿಯಪ್ಪ ಅವರ ವಿದೇಶ ಪ್ರಯಾಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹೀಗಾಗಿ ತ್ವರಿತವಾಗಿ ಸ್ಪಂದಿಸಿದ ಕೇಂದ್ರ ವಿದೇಶಾಂಗ ಸಚಿವಾಲಯ ಹಾಗೂ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಯ ನಡೆಗೆ ಹೈಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read