ಗದಗ: ಗದಗ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಅವಾಂತರ ಉಂಟಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ. ಇಬ್ಬರನ್ನು ಬಚಾವ್ ಮಾಡಲಾಗಿದ್ದು, ಮಹಿಳಾ ಸಿಬ್ಬಂದಿ ನೀರು ಪಾಲಾಗಿದ್ದಾರೆ.
ಗದಗ ಜಿಲ್ಲೆ ರೋಣ ತಾಲೂಕಿನ ಬೆಳವಣಿಕಿ ಯಾ.ಸ. ಹಡಗಲಿ ಗ್ರಾಮದ ಬಳಿ ಘಟನೆ ನಡೆದಿದೆ. ಮಿಸನ್ ಕೇರಿ ಹಳ್ಳ ಭಾರಿ ಮಳೆಯಿಂದ ರಭಸವಾಗಿ ಹರಿಯುತ್ತಿದ್ದಾಗ ಕೌಜಗೇರಿ ಆಯುಷ್ಮಾನ್ ಆರೋಗ್ಯ ಉಪ ಕೇಂದ್ರದ ಮೂವರು ಸಿಬ್ಬಂದಿ ನೀರು ಪಾಲಾಗಿದ್ದಾರೆ. ಅವರಲ್ಲಿ ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ಮಹಿಳಾ ಸಿಬ್ಬಂದಿ ನಿರುಪಾಲಾಗಿದ್ದು ಅವರಿಗಾಗಿ ಶೋಧ ಕಾರ್ಯ ನಡೆಸಲಾಗಿದೆ.
ಯಾ.ಸ. ಹಡಗಲಿ ಗ್ರಾಮದಲ್ಲಿ ಆರೋಗ್ಯ ಮೇಳ ಮುಗಿಸಿ ವಾಪಸ್ ಬರುವಾಗ ಘಟನೆ ನಡೆದಿದೆ. ಒಂದೇ ಬೈಕ್ ನಲ್ಲಿ ಮೂವರು ರಭಸವಾಗಿ ಹರಿಯುತ್ತಿದ್ದ ಹಳ್ಳ ದಾಟುವ ವೇಳೆ ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಸಮುದಾಯ ಅಧಿಕಾರಿ ಬಸವರಾಜ್, ಆರೋಗ್ಯ ನಿರೀಕ್ಷಣಾಧಿಕಾರಿ ವೀರಸಂಗಯ್ಯ ಅವರನ್ನು ರಕ್ಷಣೆ ಮಾಡಲಾಗಿದೆ. ಆರೋಗ್ಯ ಕಿರಿಯ ಸಹಾಯಕಿ ಅಧಿಕಾರಿ ಬಸಮ್ಮ ಗುರಿಕಾರ ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಪೊಲೀಸರು ಹಾಗೂ ತಹಶೀಲ್ದಾರ್, ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.