ಬೆಂಗಳೂರು: ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲಿಯೂ ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇಂದು ಒಂದೇ ದಿನ ಜಿಲ್ಲೆಯಲ್ಲಿ ಹಾರ್ಟ್ ಅಟ್ಯಾಕ್ ಗೆ ಮೂವರು ಸಾವನ್ನಪ್ಪಿದ್ದಾರೆ. ಈ ಮೂಲಕ 40 ದಿನಗಳಲ್ಲಿ 21 ಜನರು ಮೃತಪಟ್ಟಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ರಾಜ್ಯ ಸರ್ಕಾರ ವಿಶೇಷ ಸಮಿತಿ ರಚನೆ ಮಾಡಿದೆ.
ಹಾಸನದಲ್ಲಿ ಹೃದಯಾಘಾತದಿಂದ ಸರಣಿ ಸಾವಿನ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಆರೋಗ್ಯ ಇಲಾಖೆ, ಜಯದೇವ ನಿರ್ದೇಶಕ ಡಾ.ರವೀಂದ್ರನಾಥ್ ಅವರ ನೇತೃತ್ವದಲ್ಲಿ ವಿಶೇಷ ಸಮಿತಿ ರಚನೆ ಮಾಡಿದೆ. ಹಾಸನ ಜಿಲ್ಲೆಯ ಜನರ ಸಾವಿನ ಬಗ್ಗೆ ವರದಿ ನೀಡುವಂತೆ ಸೂಚಿಸಿದೆ.
ಈ ಬಗ್ಗೆ ಮಾತನಾಡಿರುವ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ, ಹಾಸನ ಜಿಲ್ಲೆಯಲ್ಲಿ 18ಕ್ಕೂ ಹೆಚ್ಚು ಡೆತ್ ರಿಪೋರ್ಟ್ ಬಂದಿದೆ. ಪ್ರತಿ ಸಾವಿನ ಬಗ್ಗೆ ವರದಿಗೆ ಸೂಚಿಸಲಾಗಿದೆ. 18 ಸಾವಿನ ಪೈಕಿ 9 ಜನರು 55 ವರ್ಷ ಮೇಲ್ಪಟ್ಟವರು. ಅವರಿಗೆ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳಿತ್ತು. 5 ಜನರು 20ರ ಹರಯೆದವರು ಎಂದು ತಿಳಿದುಬಂದಿದೆ. ಒಂದು ಸಾವು ಹಾಸನದಲ್ಲಿಯೇ ಆಗಿದೆ. ಇನ್ನುಳಿದ ನಾಲ್ಕು ಸಾವು ಬೆಂಗಳೂರಿನಲ್ಲಿ ಆಗಿದೆ. ಆದರೆ ನಾಲ್ವರೂ ಕೂಡ ಹಾಸನದವರೇ ಆಗಿದ್ದಾರೆ. ಕೆಲವರಲ್ಲಿ ಟೈಪ್ 1 ಡಯಾಬಿಟೀಸ್ ಇತ್ತು, ಕ್ರಾನಿಲ್ ಡಿಸೀಸ್ ಇತ್ತು. ಬಹುಪಾಲು ಸಾವು ಮನೆಯಲ್ಲಿಯೇ ಆಗಿದೆ. ಹಾಗಾಗಿ ಹಳೆ ಮೆಡಿಕಲ್ ರೆಕಾರ್ಡ್ ಕೂಡ ಪರಿಶೀಲಿಸಬೇಕು. 9 ಸಾವಿನ ಬಗ್ಗೆ ತಿಳಿಯಲು ಕಮಿಟಿ ರಚನೆ ಮಾಡಲಾಗಿದೆ ಎಂದು ತಿಳಿಸಿದರು.
ಇನ್ನು ಫೆಬ್ರವರಿಯಲ್ಲಿಯೇ ಈ ಸಮಿತಿ ರಚನೆಯಾಗಿದೆ. ಕೋವಿಡ್ ನಿಂದ ಹೀಗಾಗುತ್ತಿದೆಯಾ? ಎಂಬ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಇದೇ ಕಮಿಟಿಗೆ ಹಾಸನ ಮ್ರೆಡಿಕಲ್ ರಿಪೋರ್ಟ್ ತರಿಸಿ ಅಧ್ಯಯನ ನಡೆಸಲು ಸೂಚಿಸಲಾಗಿದೆ. 10 ದಿನಗಳಲ್ಲಿ ವರದಿ ಕೊಡಲು ತಿಳಿಸಿದ್ದೇವೆ ಎಂದು ಹೇಳಿದರು.