ಮಂಡ್ಯ: ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವತಿಯ ಹಿಂದೆ ಬಿದ್ದು, ನಿರಂತರವಾಗಿ ಕಿರುಕುಳ ನೀಡಿ, ಆಸಿಡ್ ದಾಳಿ ನಡೆಸುವ ಬೆದರಿಕೆ ಹಾಕಿದ್ದ ಕಿರಾತಕನ ವಿರುದ್ಧ ಮಂಡ್ಯ ಜಿಲ್ಲೆಯ ಕೆರಗೋಡು ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಸಂತ್ರಸ್ತೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆ ಮುಖಂಡ ಚಿಕ್ಕಬಳ್ಳಿ ಬಾಲಕೃಷ್ಣ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ನಾಲ್ಕು ವರ್ಷಗಳ ಹಿಂದೆ ಯುವತಿಯ ಜೊತೆ ಬಾಲಕೃಷ್ಣಗೆ ಮದುವೆ ನಿಶ್ಚಯವಾಗಿತ್ತು. ಆದರೆ ಬಾಲಕೃಷ್ಣ ಹಲವು ಸುಳ್ಳುಗಳನ್ನು ಹೇಳಿ ಮದುವೆ ನಿಶ್ಚಯ ಮಾಡಿಕೊಂಡಿರುವುದು ಯುವತಿ ಹಾಗೂ ಕುಟುಂಬದವರಿಗೆ ಗೊತ್ತಾಗುತ್ತಿದ್ದಂತೆ ಯುವತಿ ಬಾಲಕೃಷ್ಣ ಜೊತೆ ಮದುವೆಗೆ ನಿರಾಕರಿಸಿದ್ದರು. ಇದರಿಂದ ಬಾಲಕೃಷ್ಣ ಕೋಪಗೊಂಡು ಯುವತಿಗೆ ನಿರಂತರ ಕಿರುಕುಳ ನೀಡಲಾರಂಭಿಸಿದ್ದ.
ಯುವತಿಗೆ ಬೇರೆ ಮದುವೆಯ ಪ್ರಸ್ತಾಪಗಳು ಬಂದಿದ್ದವು, ಆದರೆ ಬಾಲಕೃಷ್ಣ ಯುವತಿಯ ಎಲ್ಲಾ ಮದುವೆ ಪ್ರಸ್ತಾಪಗಳನ್ನು ತಪ್ಪಿಸುತ್ತಿದ್ದ. ಹಲವು ಬಾರಿ ಯುವತಿಗೆ ಮದುವೆ ನಿಶ್ಚಯವಾಗುತ್ತಿರುವುದನ್ನು ತಪ್ಪಿಸಿದ್ದ. ಅಲ್ಲದೇ ನೀನು ಬೇರೆಯವರನ್ನು ವಿವಾಹವಾಗಲು ಬಿಡಲ್ಲ ಎಂದು ಹೆದರಿಸಿದ್ದಾನೆ. ಈಗ ಆಸಿಡ್ ದಾಳಿ ಮಾಡುವ ಬೆದರಿಕೆ ಹಾಕುತ್ತಿದ್ದಾನೆ. ಸಾರ್ವಜನಿಕ ಸ್ಥಳಗಳಲ್ಲಿ ಬಾಯಿಗೆ ಬಂದಂತೆ ಬೈದು ಅವಮಾನ ಮಾಡುತ್ತಿದ್ದಾನಂತೆ. ಇದರಿಂದ ನೊಂದ ಯುವತಿ ಕೆರಗೋಡು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.