ಮಂಡ್ಯ: ಡಿಸಿಎಂ ಡಿ.ಕೆ.ಶಿವಕುಮಾರ್ ಏನಿದ್ರೂ ಸಿಎಂ ಆಗುವ ಕನಸು ಮಾತ್ರ ಕಾಣಬೇಕು, ಅವರಿಗೆ ಸಿಎಂ ಆಗಲು ಯಾರು ಬಿಡ್ತಾರೆ? ಎಂದು ಹೇಳುವ ಮೂಲಕ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಡಿಕೆಶಿ ಏನಿದ್ರೂ ಸಿಎಂ ಆಗುವ ಕನಸು ಮಾತ್ರ ಕಾಣಬೇಕು. ಅವರು ಸಿಎಂ ಆಗಲು ಕಾಂಗ್ರೆಸ್ ನಲ್ಲಿ ಅವರಿಗೆ ಯಾರು ಬಿಡ್ತಾರೆ? ಎಂದು ಪ್ರಶ್ನಿಸಿದ್ದಾರೆ.
ಮಂಡ್ಯಕ್ಕೆ ಕುಮಾರಸ್ವಾಮಿಯವರ ಕೊಡುಗೆ ಏನು ಎಂದು ಕಾಂಗ್ರೆಸ್ ನಾಯಕರು ಕೇಳುತ್ತಿದ್ದಾರೆ. ಜಿಲ್ಲೆಗೆ ಕಾಂಗ್ರೆಸ್ ನವರ ಕೊಡುಗೆಯೇನು? ಕೃಷಿ ವಿವಿಯನ್ನು ಎಷ್ಟು ವರ್ಷ ಇಟ್ಟುಕೊಳ್ತಾರೆ? ಬೀದರ್ ನಲ್ಲಿ ಪಶುವೈದ್ಯಕೀಯ ವಿವಿಯನ್ನು ಮುಚ್ಚುವ ಪರಿಸ್ಥಿತಿ ಬಂದಿದೆ. ಹಣ ಎಷ್ಟು ಕೊಟ್ಟಿದ್ದಾರೆ? ಎಷ್ಟು ವಿವಿಗಳನ್ನು ಇವರು ಮುಚ್ಚಿದ್ದಾರೆ? ಬರಿ ಪ್ರಚಾರಕ್ಕಾಗಿ ಕೆಲಸ ಮಾಡಬಾರದು ಎಂದು ಕಿಡಿಕಾರಿದರು.
ಇನ್ನು ವಿಧಾನಸೌಧಕ್ಕೆ ಮಧ್ಯವರ್ತಿಗಳ ಅವಶ್ಯಕತೆ ಇಲ್ಲ. ಸಚಿವರುಗಳೇ ಎಲ್ಲಾ ಶುರು ಮಾಡಿಕೊಂಡಿದ್ದಾರೆ. ಎಷ್ಟು ಹಣ ಕೊಡಬೇಕು ಎಂದು ಆಯಾ ಇಲಾಖೆಯಲ್ಲಿ ಅವರೇ ಫಿಕ್ಸ್ ಮಾಡಿಕೊಂಡಿದಾರೆ ಎಂದು ಆರೋಪಿಸಿದರು.
ಬೆಂಗಳೂರಿನಲ್ಲಿ ರೋಡ್ ಟನಲ್ ಮಾಡಲು ಹೊರಟಿದ್ದಾರೆ. ಬೆಂಗಳೂರು ಮಾತ್ರವಲ್ಲ ಇಡೀ ರಾಜ್ಯಕ್ಕೆ ಮಾಡಲಿ. ನೋಡೋಣ ಯಾವ ರೋಡ್ ಟನಲ್ ಮಾಡ್ತಾರೆ ಅಂತ? ಅವರ ಮಾತುಗಳು ಯಾವುದೂ ಆಗಲ್ಲ. 2027ಕ್ಕೆ ಎತ್ತಿನ ಹೊಳೆ ಕೋಲಾರಕ್ಕೆ ತರುತ್ತೇವೆ ಎಂದಿದ್ದಾರೆ. ಇನ್ನು ಕಾಡುಮನೆ ಎಷ್ಟೇಟ್ ನಿಂದ ಮುಂದೆ ಎತ್ತಿನಹೊಳೆ ನೀರು ಬಂದಿಲ್ಲ. ಈಗಗಾಲೇ 14, 15 ಸಾವಿರ ಕೋಟಿ ಆಗಿದೆ ಇನ್ನು ಕೋಲಾರಕ್ಕೆ ತರುವುದು ಯಾವಾಗ? ಎಂದು ವ್ಯಂಗ್ಯವಾಡಿದರು.