ಬೆಂಗಳೂರು: ಸಗಟು ಮಾರುಕಟ್ಟೆಯಲ್ಲಿ ಅಕ್ಕಿ ಮತ್ತು ಬೇಳೆ ಕಾಳುಗಳ ದರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಗ್ರಾಹಕರಲ್ಲಿ ನೆಮ್ಮದಿ ತಂದಿದೆ.
ಕಳೆದ ವರ್ಷದ ಉತ್ತಮ ಮುಂಗಾರು ಹಾಗೂ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳು ಈಗ ಫಲ ನೀಡಲು ಆರಂಭಿಸಿವೆ. ಚಿಲ್ಲರೆ ವರ್ತಕರು ಕೂಡ ಬೆಲೆ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಮುಂದಾಗಿದ್ದಾರೆ.
ದೇಶದಲ್ಲಿ ಅಧಿಕ ಭತ್ತ ಉತ್ಪಾದನೆಯಾಗಿದೆ. ತೊಗರಿ ಆಮದು ಹೆಚ್ಚಳವಾಗಿದ್ದು, ಅಕ್ಕಿ ರಫ್ತು, ಆಮದು ನಿರ್ಬಂಧ ತೆರವುಗೊಳಿಸಲಾಗಿದೆ. ನೆಟೆರೋಗ ನಿಯಂತ್ರಣದಿಂದ ತೊಗರಿ ಉತ್ಪಾದನೆ ಹೆಚ್ಚಳವಾಗಿದೆ. ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ರೈತರಿಂದ ದಾಸ್ತಾನು ಮಾಡಿದ್ದ ಅಕ್ಕಿ, ಬೇಳೆ ಮಾರಾಟ ಮಾಡುತ್ತಿದ್ದಾರೆ.
ಕಳೆದ ವರ್ಷ ಭತ್ತ, ಬೇಳೆಕಾಳು ಉತ್ಪಾದನೆ ಶೇಕಡ 20ರಷ್ಟು ಹೆಚ್ಚಳವಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಅಕ್ಕಿ, ಬೇಳೆ ಕಾಳು ದರ ಶೇಕಡ 15 ರಿಂದ 20ರಷ್ಟು ಕಡಿಮೆಯಾಗಿದೆ. ತೊಗರಿ ಬೇಳೆ, ಉದ್ದಿನ ಬೇಳೆ ಜೊತೆಗೆ ಇತರೆ ಬೇಳೆ ಕಾಳುಗಳು, ಸ್ಟೀಮ್ ರೈಸ್ ದರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಏಪ್ರಿಲ್ ನಲ್ಲಿ 180 ರಿಂದ 200 ರೂಪಾಯಿ ಇದ್ದ ತೊಗರಿ ಬೆಳೆ ದರ 130 ರಿಂದ 150 ರೂಪಾಯಿಗೆ ಇಳಿಕೆಯಾಗಿದೆ.
110 ರಿಂದ 120 ಇದ್ದ ಕಡಲೆ ಬೇಳೆ ದರ 103 ರೂಪಾಯಿ ಆಗಿದೆ. 170 ರಿಂದ 190 ರೂ.ವರೆಗೆ ಇದ್ದ ಉದ್ದಿನ ಬೇಳೆ ದರ 150 ರೂ.ಗೆ ಇಳಿಕೆಯಾಗಿದೆ. 90 ರಿಂದ 100 ರೂಪಾಯಿವರೆಗೆ ಇದ್ದ ಕಡಲೆ ಕಾಳು ದರ 88 ರೂ.ಗೆ ಇಳಿಕೆಯಾಗಿದೆ.
62 ರಿಂದ 65 ರೂ.ವರೆಗೆ ಗ್ರೇಡ್ -1 ಸ್ಟೀಮ್ ಅಕ್ಕಿದರ 55 ರಿಂದ 60 ರೂ.ಗೆ ಕಡಿಮೆಯಾಗಿದೆ. 55 ರಿಂದ 57 ರೂ. ಇದ್ದ ಗ್ರೇಡ್ -2 ಸ್ಟೀಮ್ ಅಕ್ಕಿ ದರ 50 ರೂ.ಗೆ ಇಳಿಕೆಯಾಗಿದೆ. 48 ರಿಂದ 50 ರೂ. ಇದ್ದ ಗ್ರೇಡ್ -3 ಸ್ಟೀಮ್ ಅಕ್ಕಿ ದರ 42- 45 ರೂ.ಗೆ ಇಳಿಕೆಯಾಗಿದೆ.