ಬೆಂಗಳೂರು: ಕಷ್ಟದಲ್ಲಿರುವ ಕಲಾವಿದರ ಮಾಸಾಶನ ಹೆಚ್ಚಳ ಮಾಡಿರುವ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. 2000 ರೂ. ಇದ್ದ ಕಲಾವಿದರ ಮಾಸಾಶನವನ್ನು 2500 ರೂ.ಗೆ ಹೆಚ್ಚಿಸಲಾಗಿದೆ. ಇದಕ್ಕಾಗಿ 32.94 ಕೋಟಿ ರೂ. ಅನುದಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡಿದೆ.
ಕಳೆದ ವರ್ಷ ನಾಟಕ ಅಕಾಡೆಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ ಕಲಾವಿದರ ಮಾಸಾಶನವನ್ನು 2000 ದಿಂದ 3000 ರೂ.ಗೆ ಏರಿಕೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ 2500 ರೂ.ಗೆ ಏರಿಕೆ ಮಾಡಲಾಗಿದೆ.
ಕಲಾವಿದರಿಗೆ ಮಾಸಿಕ 5,000 ರೂ. ಮಾಸಾಶನ ನೀಡಬೇಕೆಂಬ ಬೇಡಿಕೆ ಇದ್ದು, ಸದ್ಯ 500 ರೂಪಾಯಿ ಮಾತ್ರ ಹೆಚ್ಚಳ ಮಾಡಲಾಗಿದೆ. ಕಳೆದ ವರ್ಷದ ಲೆಕ್ಕಾಚಾರದಂತೆ 60 ವರ್ಷ ಮೀರಿದ 12,543 ಮಂದಿ ಕಲಾವಿದರು ಮಾಸಾಶನ ಪಡೆಯುತ್ತಿದ್ದಾರೆ.