ರಾಜ್ಯದಲ್ಲಿ ಹತ್ತಿ ಪ್ರಮುಖ ಬೆಳೆಯಾಗಿದ್ದು, ಹತ್ತಿ ಕೃಷಿ ಉತ್ಪನ್ನಕ್ಕೆ ಪ್ರಸ್ತುತ ಮಾರುಕಟ್ಟೆ ದರವು ಕಡಿಮೆಯಾಗಿರುವುದರಿಂದ ಕೇಂದ್ರ ಸರ್ಕಾರವು 2025-26 ನೇ ಸಾಲಿಗೆ ಹತ್ತಿ ಕೃಷಿ ಉತ್ಪನ್ನಕ್ಕೆ ಬೆಂಬಲ ಬೆಲೆ ಯೋಜನೆಯಡಿ ಮಧ್ಯಮ ಎಳೆ ಹತ್ತಿಗೆ ರೂ.7,710 ಮತ್ತು ಉದ್ದನೆಯ ಎಳೆ ಹತ್ತಿಗೆ ರೂ.8,110 ದರವನ್ನು ಘೊಷಿಸಿದೆ.
ಹತ್ತಿ ಕೃಷಿ ಉತ್ಪನ್ನಕ್ಕೆ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಮಧ್ಯಮ ಎಳೆ ಹತ್ತಿಗೆ ರೂ.7,710 ಮತ್ತು ಉದ್ದನೆಯ ಎಳೆ ಹತ್ತಿಗೆ ರೂ.8,110 ದರ ನಿಗದಿ ಮಾಡಿ ಅ.31 ರೊಳಗೆ ರೈತರ ನೋಂದಣಿಗೆ ಅವಕಾಶ ಕಲ್ಪಿಸಿದ್ದು, ರೈತರು ಇದರ ಪ್ರಯೋಜನ ಪಡೆಯಬೇಕೆಂದು ಧಾರವಾಡ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರೈತರ ಆರ್ಥಿಕ ಹಿತದೃಷ್ಟಿಯಿಂದ ಭಾರತೀಯ ಹತ್ತಿ ನಿಗಮದಿಂದ ಬೆಂಬಲ ಬೆಲೆ ಯೋಜನೆಯಡಿ ಸುಗಮವಾಗಿ ರೈತರ ನೋಂದಣಿಯನ್ನು ಡಿಜಿಟಲ್ ಮೂಲಕ ಕೈಗೊಳ್ಳುವ ಹಾಗೂ ನಿಗದಿತ ಸಮಯಕ್ಕೆ ಮಾರಾಟ ಮಾಡಿದ ಹತ್ತಿಯ ಪ್ರಮಾಣಕ್ಕನುಗುಣವಾಗಿ ಡಿ.ಬಿ.ಟಿ ಮೂಲಕ ರೈತರಿಗೆ ಹಣ ಪಾವತಿಯಾಗಲು ಅನುಕೂಲವಾಗುವಂತೆ, ಕಪಾಸ್ ಕಿಸಾನ್ ಎಂಬ ಮೊಬೈಲ್ ಆ್ಯಪ್ ಸಿದ್ದಪಡಿಸಲಾಗಿದೆ. ಈ ಮೊಬೈಲ್ ಆ್ಯಪ್ ಮೂಲಕ ರೈತರು ಅಕ್ಟೋಬರ್ 31, 2025 ವರೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಹತ್ತಿ ಬೆಳೆಯುವ ರೈತರಿಗೆ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಸುಗಮವಾಗಿ ಹತ್ತಿ ಮಾರಾಟ ಮಾಡಲು ಅನುಕೂಲವಾಗುವಂತೆ ರೈತರ ನೋಂದಣಿಗಾಗಿ ಇ-ಆಡಳಿತ ಇಲಾಖೆಯಿಂದ ಎಪಿಐ ಅನ್ನು ಈಗಾಗಲೇ ಭಾರತಿಯ ಹತ್ತಿ ನಿಗಮದೊಂದಿಗೆ ಜೋಡಣೆ ಮಾಡಲಾಗಿದೆ.
ಬೆಂಬಲ ಬೆಲೆ ಯೋಜನೆಯಡಿ ಹತ್ತಿ ಖರೀದಿ ನಿರ್ವಹಣೆಗಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಕಾರ್ಯದರ್ಶಿ, ಸಿಸಿಐ ಅಧಿಕಾರಿಗಳು, ಕೃಷಿ ಇಲಾಖೆ ಹಾಗೂ ಇತರೆ ಸ್ಥಳಿಯ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಯಾವುದೇ ತಾಂತ್ರಿಕ ದೋಷ, ನ್ಯೂನತೆಗಳಿಗೆ ಆಸ್ಪದ ನೀಡದೇ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಯೋಜನೆಯ ಪ್ರಯೋಜನ ಪಡೆಯಲು ಈ ಮೂಲಕ ಕ್ರಮ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕನಿಷ್ಠ ಬೆಂಬಲ ಬೆಲೆ (ಎಮ್ಎಸ್ಪಿ) ಯೋಜನೆ ಅಡಿಯಲ್ಲಿ ಈಗಾಗಲೇ ರೈತರ ಸ್ವಯಂ ನೋಂದಣಿಯನ್ನು ಸೆಪ್ಟೆಂಬರ್ 01 ರಿಂದ ಆರಂಭಿಸಿದ್ದು, ಅಕ್ಟೋಬರ್ 31, 2025 ರವರೆಗೆ ವಿಸ್ತರಿಸಲಾಗಿದೆ. ಭಾರತೀಯ ಹತ್ತಿ ನಿಗಮ (ಸಿಸಿಐ) ಇವರಿಗೆ ಹತ್ತಿ ಉತ್ಪನ್ನ ಮಾರಾಟ ಮಾಡಲು ಕಪಾಸ್ ಕಿಸಾನ್ ಎಂಬ ಮೊಬೈಲ್ ಆ್ಯಪ್ ಮೂಲಕ ರೈತರು ಸ್ವಯಂ ನೋಂದಾಯಿಸಿಕೊಳ್ಳಲು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.