ಚಿತ್ರದುರ್ಗ: ಸರ್ಕಾರಕ್ಕೆ ಎರಡು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಮೇ 20ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ 1 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ, ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ನಾವು ಮಾಡಿರುವ ಕೆಲಸವನ್ನು ಜನರಿಗೆ ಸಮರ್ಪಣೆ ಮಾಡುತಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಇದು 2 ವರ್ಷಗಳ ಸಂಭ್ರಮಾಚರಣೆ ಕಾರ್ಯಕ್ರಮ ಅಲ್ಲ, ನಾವು ಮಾಡಿರುವ ಮಹತ್ವಪೂರ್ಣ ಕಾರ್ಯವನ್ನು ಜನರಿಗೆ ಸಮರ್ಪಿಸಿ, ಅವರ ಬದುಕಿಗೆ ಸ್ಥಿರತೆ ತಂದು ಕೊಡುವ ಅರ್ಥಪೂರ್ಣ ಕಾರ್ಯಕ್ರಮ ಇದಾಗಲಿದೆ. ಜನರಿಗೆ ಶಕ್ತಿ ತುಂಬುವ ಮೂಲಕ ಸರ್ಕಾರದ ಎರಡು ವರ್ಷಗಳ ಸಾಧನೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ 1 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ, ದಾಖಲೆ ವಿತರಿಸುವ ಮೂಲಕ ಆಚರಿಸುತ್ತಿದ್ದೇವೆ ಎಂದು ಹೇಳಿದರು.
ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಎಲ್ಲ ಸಚಿವರು ಭಾಗವಹಿಸಲಿದ್ದು, ನಮ್ಮ ಸರ್ಕಾರ ಜನಪರ ಹಾಗೂ ಬಡವರ ಪರವಾಗಿದೆ. ರಾಜ್ಯದ ಜನತೆಗೆ ಸಮರ್ಪಿಸಲು 2 ವರ್ಷದ ಸಾಧನೆ ಕಾರ್ಯಕ್ರಮ ವೇದಿಕೆಯಾಗಲಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಈ ಕಾರ್ಯಕ್ರಮಕ್ಕೆ ಪ್ರತಿ ಫಲಾನುಭವಿ ಜೊತೆಗೆ ಅವರ ಕುಟುಂಬ ಸದಸ್ಯರೊಬ್ಬರು ಆಗಮಿಸುವ ರೀತಿ ವ್ಯವಸ್ಥೆ ಮಾಡಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯಿಂದಲೂ ವಿವಿಧ ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಸಮರ್ಪಕವಾಗಿ ಕರೆತರುವ ರೀತಿಯಲ್ಲಿ ವ್ಯವಸ್ಥೆ ಕೈಗೊಳ್ಳಬೇಕು, ಹಾಗಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಿ, ಫಲಾನುಭವಿ ಹಾಗೂ ಕುಟುಂಬದ ಒರ್ವ ಸದಸ್ಯರನ್ನು ಕರೆತರುವ ಮೂಲಕ ಸವಲತ್ತು ವಿತರಣಾ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹೇಳಿದರು.