ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 51.61 ಲಕ್ಷ ಮಕ್ಕಳಿಗೆ 2025- 26ನೇ ಶೈಕ್ಷಣಿಕ ಸಾಲಿನಲ್ಲಿ 244 ದಿನ ಮೊಟ್ಟೆ/ಬಾಳೆಹಣ್ಣು ವಿತರಿಸಲು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ವಾರದಲ್ಲಿ ಎರಡು ದಿನ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನದಲ್ಲಿ, ಉಳಿದ ನಾಲ್ಕು ದಿನ ಅಜೀಂ ಪ್ರೇಮ್ ಜೀ ಫೌಂಡೇಶನ್ ಸಹಯೋಗದಲ್ಲಿ ಪೌಷ್ಟಿಕ ಆಹಾರ ವಿತರಿಸಲಾಗುವುದು.
ಪೂರ್ವ ಪ್ರಾಥಮಿಕ ತರಗತಿಯಿಂದ ಹತ್ತನೇ ತರಗತಿವರೆಗಿನ ಮಕ್ಕಳು ಯೋಜನೆಯ ಫಲಾನುಭವಿಗಳಾಗಿದ್ದಾರೆ. ಪ್ರತಿ ವಿದ್ಯಾರ್ಥಿಗೆ ದಿನಕ್ಕೆ ಒಂದು ಮೊಟ್ಟೆ ಅಥವಾ 2 ಬಾಳೆಹಣ್ಣಿಗೆ ಆರು ರೂಪಾಯಿ ವಿನಿಯೋಗಿಸಲಾಗುವುದು. ಮೊಟ್ಟೆಯ ತೂಕ ಕನಿಷ್ಠ 50 ಗ್ರಾಂ ಇರಬೇಕು. ಮೊಟ್ಟೆ ತಿನ್ನದ ಮಕ್ಕಳಿಗೆ ಎರಡು ಉತ್ತಮವಾದ ಬಾಳೆಹಣ್ಣು ವಿತರಿಸಬೇಕು.
ಮೊಟ್ಟೆ ಮತ್ತು ಬಾಳೆಹಣ್ಣು ತಿನ್ನುವ ಮಕ್ಕಳ ಅಂಕಿ ಅಂಶಗಳನ್ನು ಇಲಾಖೆಗೆ ಅಪ್ಡೇಟ್ ಮಾಡಬೇಕು. ಪ್ರತಿದಿನ ಪ್ರಾರ್ಥನೆಯ ವೇಳೆ ಪೌಷ್ಟಿಕಾಂಶದ ಪ್ರಯೋಜನಗಳ ಕುರಿತಾಗಿ ಅರಿವು ಮೂಡಿಸಬೇಕು ಎಂದು ತಿಳಿಸಲಾಗಿದೆ.