ಮಾವು ಬೆಳೆಗಾರರಿಗೆ ಗುಡ್ ನ್ಯೂಸ್: ಬೆಲೆ ವ್ಯತ್ಯಾಸ ಮೊತ್ತ ಪಾವತಿಗೆ ಆವರ್ತನಿಧಿಯಿಂದ ಅನುದಾನ ಬಿಡುಗಡೆ

ಬೆಂಗಳೂರು: ಮಾವು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ. ಆವರ್ತನಿಧಿಯಿಂದ ತೋಟಗಾರಿಕೆ ಇಲಾಖೆಯ ಮಾವು ಅಭಿವೃದ್ಧಿ ಮಂಡಳಿಗೆ 101 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ.

ಪಿಡಿಪಿಎಸ್ ಯೋಜನೆ ಮಾರ್ಗಸೂಚಿಗಳ ಅನ್ವಯ ಅನುದಾನ ಬಿಡುಗಡೆ ಮಾಡಲಾಗಿದೆ. ಬೆಲೆ ವ್ಯತ್ಯಾಸದ ಮೊತ್ತವನ್ನು ರೈತರಿಗೆ ಪಾವತಿಸಲು ಹಣ ಬಿಡುಗಡೆ ಮಾಡಲಾಗಿದೆ. ಶೇಕಡ 50ರಷ್ಟು ಮೊತ್ತವನ್ನು ಕೇಂದ್ರದಿಂದ ಮರುಪಾವತಿ ಪಡೆಯಲು ಕ್ರಮ ವಹಿಸಲಾಗಿದೆ. ಕೇಂದ್ರದಿಂದ ಮರುಪಾವತಿ ಪಡೆಯಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ.

ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಈ ಬಗ್ಗೆ ಮಾಹಿತಿ ನೀಡಿದ್ದು, ಬೆಲೆ ಕುಸಿತದಿಂದ ಸಮಸ್ಯೆಗೆ ಸಿಲುಕಿದ ಮಾವು ಬೆಳೆಗಾರರಿಗೆ ನೆರವಾಗಲು ಕೇಂದ್ರ ಸರ್ಕಾರದ ಸಹಕಾರದೊಂದಿಗೆ ರಾಜ್ಯ ಸರ್ಕಾರವು ಮಾರುಕಟ್ಟೆ ಮಧ್ಯ ಪ್ರವೇಶ ದರದಂತೆ ಪ್ರತಿ ಕ್ವಿಂಟಾಲ್ ಮಾವಿಗೆ 1616 ರೂಪಾಯಿ ನಿಗದಿಪಡಿಸಲಾಗಿದ್ದು, ಮುಂದಿನ ಒಂದು ತಿಂಗಳವರೆಗೆ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

2.5 ಲಕ್ಷ ಮೆಟ್ರಿಕ್ ಟನ್ ಮಾವು ಖರೀದಿಸಲಾಗುವುದು. ಅದರಂತೆ ಬೆಲೆ ವ್ಯತ್ಯಾಸ ಪಾವತಿ ವ್ಯವಸ್ಥೆಯಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ಕೆಜಿ ಮಾವಿಗೆ ತಲಾ ಎರಡು ರೂಪಾಯಿಯಂತೆ ಒಟ್ಟು ನಾಲ್ಕು ರೂಪಾಯಿಗಳನ್ನು ನೀಡುವ ಮೂಲಕ ಮಾರುಕಟ್ಟೆ ಚೈತನ್ಯಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮೇ ತಿಂಗಳಿಂದ ಜುಲೈವರೆಗೆ ಮಾವು ಕಟಾವು ಮಾಡಲಾಗುತ್ತದೆ. ಈ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ದರ ವ್ಯತ್ಯಾಸ ಗಮನಿಸಿ ವ್ಯತ್ಯಾಸ ದರವನ್ನು ಪಾವತಿಸಲಾಗುವುದು. ಕೇಂದ್ರದ ಮಾರ್ಗಸೂಚಿಯಂತೆ ಕ್ವಿಂಟಾಲ್ ಮಾವಿಗೆ ಗರಿಷ್ಠ 1616 ರೂಪಾಯಿ ನಿಗದಿಪಡಿಸಲಾಗಿದೆ. ಅದರ ಜೊತೆಗೆ 2.50 ಲಕ್ಷ ಮೆಟ್ರಿಕ್ ಟನ್ ಗಳಷ್ಟು ಮಾರುಕಟ್ಟೆ ಮಧ್ಯ ಪ್ರವೇಶದಲ್ಲಿ ಖರೀದಿಸಲು ನಿರ್ಧರಿಸಲಾಗಿದೆ. ಇದಕ್ಕೆ 101 ಕೋಟಿ ರೂ. ವೆಚ್ಚವಾಗದಲ್ಲಿದ್ದು, ಅದರಲ್ಲಿ ಕೇಂದ್ರ ಸರ್ಕಾರ 50.50 ಕೋಟಿ ರೂಪಾಯಿ ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read