ಬೆಂಗಳೂರು: 348 ಕೆಎಎಸ್ ಅಧಿಕಾರಿಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.
ಸರ್ಕಾರಿ ನೇಮಕಾತಿಯಲ್ಲಿ ಮೀಸಲು ಜಾರಿಗೆ ಸಂಬಂಧ ನಿಯಮ ಉಲ್ಲಂಘನೆಯಾಗಿದೆ ಎಂದು 348 ಕೆಎಎಸ್ ಅಧಿಕಾರಿಗಳ ನೇಮಕ ಕುರಿತ ಅಧಿಸೂಚನೆ ರದ್ದುಗೊಳಿಸಿದ ಕೆಎಟಿ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ಕೆಎಎಸ್ ನೇಮಕ ಪ್ರಕ್ರಿಯೆ ಮುಂದುವರೆಸಲು ಸಮ್ಮತಿಸಿದೆ. ಇದರಿಂದಾಗಿ ಅತಂತ್ರಕ್ಕೆ ಸಿಲುಕಿದ ನೇಮಕಾತಿಯನ್ನು ಮತ್ತೆ ಮುಂದುವರಿಸಲು ಕೆ.ಪಿ.ಎಸ್.ಸಿ. ಗೆ ಹಸಿರು ನಿಶಾನೆ ದೊರೆತಂತಾಗಿದೆ.
ಮುಖ್ಯ ಪರೀಕ್ಷೆ ಬರೆದು ನೇಮಕಾತಿಗೆ ಕಾಯುತ್ತಿದ್ದ ಅಭ್ಯರ್ಥಿಗಳು ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ. ಕಳೆದ ಮೇ 28ರಂದು ಕೆಎಟಿ ನೀಡಿದ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಆಲಿಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್, ನ್ಯಾಯಮೂರ್ತಿ ವೆಂಕಟೇಶ ಟಿ. ನಾಯಕ್ ಅವರಿದ್ದ ವಿಭಾಗಿಯ ಪೀಠದಿಂದ ಈ ಮಧ್ಯಂತರ ಆದೇಶ ನೀಡಲಾಗಿದೆ.