ಬೆಂಗಳೂರು: ಅವಧಿಗೆ ಮುನ್ನವೇ ಮುಂಗಾರು ಆಗಮನವಾಗಿದ್ದು, ರೈತರು ಬಿತ್ತನೆಗಾಗಿ ಭೂಮಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ತಕ್ಕಂತೆ ಕೃಷಿ ಇಲಾಖೆ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಿಕೊಂಡಿದೆ.
ರೈತ ಸಂಪರ್ಕ ಕೇಂದ್ರಗಳಲ್ಲಿ ಈಗಾಗಲೇ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಆರಂಭವಾಗಿದೆ. ಸಾಮಾನ್ಯವಾಗಿ ಜೂನ್ ಮೊದಲ ವಾರ ಮುಂಗಾರು ಆಗಮನವಾಗುತ್ತಿತ್ತು. ಈ ಬಾರಿ ಮೇ 24ರ ವೇಳೆಗೆ ಮುಂಗಾರು ಪ್ರಬಲವಾಗಿತ್ತು. ಜೂನ್ -ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಈ ಬಾರಿ ಬಿತ್ತನೆ ನಡೆಯಬಹುದೆಂದು ಹೇಳಲಾಗಿದೆ.
ರೈತರಿಗೆ ಅಗತ್ಯವಾದ ಬೀಜ, ರಸಗೊಬ್ಬರ ಕೊರತೆ ಉಂಟಾಗದಂತೆ ಕೃಷಿ ಇಲಾಖೆ ಕ್ರಮ ಕೈಗೊಂಡಿದೆ. ನಕಲಿ ಬಿತ್ತನೆ ಬೀಜದಿಂದ ಸಮಸ್ಯೆ ಉಂಟಾಗುವುದನ್ನು ತಡೆಯಲು ಕ್ಯೂಆರ್ ಕೋಡ್ ಆಧಾರಿತ ಗುಣಮಟ್ಟದ ಪ್ರಮಾಣೀಕೃತ ಬಿತ್ತನೆ ಬೀಜಗಳ ವಿತರಣೆಗೆ ಕೃಷಿ ಇಲಾಖೆ ಕ್ರಮ ಕೈಗೊಂಡಿದೆ. ಕ್ಯೂಆರ್ ಕೊಡ್ ಸ್ಕ್ಯಾನ್ ಮಾಡಿದರೆ ಆ ಬೀಜದ ಪ್ರಮಾಣೀಕೃತ ಮಾಹಿತಿ ಗೊತ್ತಾಗುತ್ತದೆ.
82.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಇದ್ದು, 4.63 ಲಕ್ಷ ಕ್ವಿಂಟಾಲ್ ಗೂ ಅಧಿಕ ಬಿತ್ತನೆ ಬೀಜದ ಬೇಡಿಕೆ ಇದೆ. 5.99 ಲಕ್ಷ ಕ್ವಿಂಟಾಲ್ ಗೂ ಅಧಿಕ ದಾಸ್ತಾನು ಮಾಡಿಕೊಳ್ಳಲಾಗಿದೆ.