ಚಿತ್ರದುರ್ಗ : 2025-26ನೇ ಸಾಲಿನಲ್ಲಿ ಹೊಸದುರ್ಗ ತಾಲ್ಲೂಕು ತೋಟಗಾರಿಕೆ ಇಲಾಖೆ ವತಿಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಘಟಕಗಳಿಗೆ ಸಹಾಯಧನ ಪಡೆಯಲು ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಜೂನ್ 20 ಅರ್ಜಿ ಸಲ್ಲಿಸಲು ಕೊನೆಯ ದಿನ.
ಈ ಯೋಜನೆಯಡಿ ದಾಳಿಂಬೆ, ಮಾವು, ಪೇರಲ, ಮೋಸಂಬಿ, ಡ್ರ್ಯಾಗನ್ ಪ್ರೂಟ್ಸ್, ಗೇರು, ಕೋಕೋ, ಕಾಳುಮೆಣಸು, ಕಂದು ಬಾಳೆ ಮತ್ತು ಅಂಗಾಂಶಬಾಳೆ, ಪಪ್ಪಾಯ. ಹೈಬ್ರಿಡ್ ತರಕಾರಿ ಮತ್ತು ಬಿಡಿಹೂವು ಬೆಳೆಗಳ ಹೊಸ ಪ್ರದೇಶ ವಿಸ್ತರಣೆಗೆ ಸಹಾಯಧನದ ಸೌಲಭ್ಯವಿರುತ್ತದೆ.
ಮುಂದುವರೆದು ತರಕಾರಿ ಬೆಳೆಗಳಿಗೆ ಆಧಾರ ನೀಡುವ ವ್ಯವಸ್ಥೆಗೆ, ಪ್ಲಾಸ್ಟಿಕ್ ಮಲ್ಟಿಂಗ್ ಹಾಗೂ ಕಳೆ ನಿಯಂತ್ರಿಕ ಮ್ಯಾಟ್ಗೆ. ಪಕ್ಷಿ ನಿರೋಧಕ ಬಲೆ ಹಾಗೂ ಸಮಗ್ರ ಕೀಟ ರೋಗ ಮತ್ತು ಫೋಷಕಾಂಶ ನಿರ್ವಹಣೆ ಮಾಡುವ ರೈತರಿಗೆ ಸಹಾಯಧನ ನೀಡಲಾಗುವುದು. ಜೊತೆಗೆ ಈರುಳ್ಳಿ ಶೇಖರಣಾ ಘಟಕ, ವೈಯಕ್ತಿಕ ಕೃಷಿ ಹೊಂಡ, ಸಣ್ಣ ಪ್ರಮಾಣದ ಅಣಬೆ ಉತ್ಪಾದನಾ ಘಟಕ, ಸೋಲಾರ್ ಕ್ರಾಪ್ ಡ್ರೈಯರ್ ಹಾಗೂ ಜೇನು ಕೃಷಿ ಉತ್ತೇಜನಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನಾಧರಿಸಿ ಶೇ.25 ರಿಂದ 50 ರಷ್ಟು ಸಹಾಯಧನ ನೀಡಲಾಗುವುದು.
ಆಸಕ್ತ ರೈತರು ತಮ್ಮ ಅರ್ಜಿಯೊಂದಿಗೆ ಪ್ರೂಟ್ಸ್ ನೊಂದಣಿ ಸಂಖ್ಯೆ, 2025-26ನೇ ಸಾಲಿನ ಪಹಣಿ, ಆಧಾರ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಪಾಸ್ ಪೋಟೋ ಸೈಜ್ ಪೋಟೋ , ಮತ್ತಿತರ ದಾಖಲಾತಿಗಳನ್ನು ಲಗತ್ತಿಸಿ 20-ಜೂನ್-2025 ರೊಳಗಾಗಿ ಹೊಸದುರ್ಗ ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ಕಛೇರಿಗೆ ಸಲ್ಲಿಸಬೇಕಾಗಿರುತ್ತದೆ. ನಿಯಮಾನುಸಾರ ಸ್ವೀಕೃತವಾಗಿರುವ ಅರ್ಜಿಗಳನ್ನು ಮಾರ್ಗಸೂಚಿ ಪ್ರಕಾರ ಅರ್ಹತೆ ಮತ್ತು ಜೇಷ್ಠತೆ ಆಧಾರದ ಮೇಲೆ ತಾಲ್ಲೂಕಿಗೆ ನಿಗಧಿಯಾಗಿರುವ ಗುರಿಗಳಿಗೆ ಒಳಪಟ್ಟು ಸಹಾಯಧನಕ್ಕಾಗಿ ಅರ್ಜಿಗಳನ್ನು ಪರಿಗಣಿಸಲಾಗುವುದು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಹೊಸದುರ್ಗ ಕಛೇರಿಗೆ ಭೇಟಿ ನೀಡಿ, ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.