ಕಾಯಂ ನೇಮಕಾತಿ ಸೌಲಭ್ಯ ಪಡೆದಿರುವ 12,692 ಪೌರಕಾರ್ಮಿಕರಿಗೆ ಇನ್ನು ಮುಂದೆ ತಿಂಗಳಿಗೆ 39,000 ರೂ. ವೇತನ, ನಿವೃತ್ತಿ ವೇಳೆ 10 ಲಕ್ಷ ರೂ.ಇಡುಗಂಟು ಹಾಗೂ 6 ಸಾವಿರ ರೂ.ಪಿಂಚಣಿ ಸಿಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ 12,692 ಪೌರಕಾರ್ಮಿಕರಿಗೆ ಕಾಯಂ ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಸಿಎಂ, ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ʼಡಿʼ ದರ್ಜೆ ನೌಕರರಿಗೆ ಸಿಗುವ ಎಲ್ಲಾ ಸವಲತ್ತುಗಳು ಪೌರಕಾರ್ಮಿಕರಿಗೂ ಸಿಗಲಿವೆ ಎಂದು ಹೇಳಿದ್ದಾರೆ.
ಪಾಲಿಕೆ ಆಯುಕ್ತರಿಗೆ ಸಿಗುವ ಗೌರವ ಪೌರಕಾರ್ಮಿಕರಿಗೂ ಸಿಗಬೇಕು. ಅವರು ಗೌರವಯುತವಾದ ಜೀವನ ನಡೆಸುವಂತಾಗಲಿ ಎಂದು ಕಾಯಂ ಆದ ಪೌರಕಾರ್ಮಿಕರಿಗೆ ಮಾಸಿಕ 39 ಸಾವಿರ ರೂ. ವೇತನ ನಿಗದಿಪಡಿಸಲಾಗಿದೆ. ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುವ ಡಿ ದರ್ಜೆ ನೌಕರರಿಗೆ ಸಿಗುವ ಸಂಬಳ ಇತರೆ ಎಲ್ಲಾ ಸೌಲಭ್ಯಗಳು ಪೌರಕಾರ್ಮಿಕರಿಗೂ ಸಿಗಲಿದೆ ಎಂದು ಹೇಳಿದ್ದಾರೆ.