ಬೆಂಗಳೂರು: ಅಪಘಾತಕ್ಕೀಡಾದ ಸಂದರ್ಭದಲ್ಲಿ ಗಾಯಾಳುಗಳಿಗೆ ತುರ್ತು ಆರೈಕೆ ಮಾಡಲು ಮತ್ತು ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಪಾಲಿ ಟ್ರಾಮಾ ಸೆಂಟರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಇದು ದೇಶದ ಎರಡನೇ ಕೇಂದ್ರವಾಗಲಿದೆ. ಬೆಂಗಳೂರಿನ ನಿಮ್ಹಾನ್ಸ್ ಸ್ನಾತಕೋತ್ತರ ಪದವಿ ಮತ್ತು 300 ಹಾಸಿಗೆ ಸಾಮರ್ಥ್ಯದ ಪಾಲಿ ಟ್ರಾಮಾ ಕೇಂದ್ರ ನಿರ್ಮಿಸುವ ಪ್ರಸ್ತಾವನೆಗೆ ಕೇಂದ್ರ ಹಣಕಾಸು ಇಲಾಖೆ ಅನುಮೋದನೆ ನೀಡಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ನಿಲ್ದಾಣ ಸಮೀಪ ಇರುವ ಕ್ಯಾಲಸನಹಳ್ಳಿಯಲ್ಲಿ 498 ಕೋಟಿ ರೂಪಾಯಿ ವೆಚ್ಚದಲ್ಲಿ ಪಾಲಿ ಟ್ರಾಮಾ ಕೇಂದ್ರ ನಿರ್ಮಾಣ ಮಾಡಲಾಗುವುದು.
ಈ ಕೇಂದ್ರ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ 2012 -13ರಲ್ಲಿ ಕ್ಯಾಲಸನಹಳ್ಳಿಯಲ್ಲಿ 39 ಎಕರೆ ಭೂಮಿ ಮಂಜೂರು ಮಾಡಿತ್ತು. ಬೆಂಗಳೂರಿನಲ್ಲಿ ಪಾಲಿ ಟ್ರಾಮಾ ಸೆಂಟರ್ ಸ್ಥಾಪನೆಗೆ ಅನುಮೋದನೆ ನೀಡಿರುವ ಕೇಂದ್ರ ಸರ್ಕಾರಕ್ಕೆ ಸಂಸದ ಡಾ. ಸಿ.ಎನ್. ಮಂಜುನಾಥ್ ಧನ್ಯವಾದ ಹೇಳಿದ್ದಾರೆ.