SHOCKING NEWS: ಸಾಲ ತೀರಿಸಲು ಬಾಲಕಿಯನ್ನೇ ಮಾರಾಟ ಮಾಡಿದ ಚಿಕ್ಕಮ್ಮ

ತುಮಕೂರು: ಸಾಲ ತೀರಿಸಲು ಚಿಕ್ಕಮ್ಮನೇ ಬಾಲಕಿಯನ್ನು ಮಾರಾಟ ಮಾಡಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದ ಹಿಂದೂಪುರದಲ್ಲಿ ಈ ಘಟನೆ ನಡೆದಿದೆ.

ತುಮಕೂರು ನಗರದ ದಿಬ್ಬೂರು ನಿವಾಸಿ ಚೌಡಮ್ಮ ಎಂಬುವವರ ಪುತ್ರಿಯನ್ನು ಚೌಡಮ್ಮ ಸಹೋದರಿ ಸುಜಾತಾ ಮಾರಾಟ ಮಾಡಿದ್ದಾರೆ. ಚೌಡಮ್ಮ ತನ್ನ ಮಗಳನ್ನು ಸಹೋದರಿ ಸುಜಾತಾ ಅವರ ಬಳಿ ಕಳುಹಿಸಿದ್ದರಂತೆ. ಸುಜಾತಾ ಮಗಳ ಬಾಣಂತನಕ್ಕೆಂದು ಹಿಂದೂಪುರಕೆ ತೆರಳಿದ್ದರು. ಈ ವೇಳೆ ಬಾಲಕಿಯನ್ನು ಕರೆದುಕೊಂಡು ಹೋಗಿದ್ದರು. ಮಗಳನ್ನು ಕರೆತರಲೆಂದು ಹಿಂದೂಪುರಕ್ಕೆ ಚೌಡಮ್ಮ ಹೋಗಿದ್ದಾಗ ಘಟನೆ ಬೆಳಕಿಗೆ ಬಂದಿದೆ.

ಬಾತುಕೋಳಿಗಳನ್ನು ಮೇಯಿಸಲು ಇದ್ದ ಶ್ರೀರಾಮುಲು ಎಂಬಾತನಿಗೆ ಬಾಲಕಿಯನ್ನು ಚಿಕ್ಕಮ್ಮ ಸುಜಾತಾ 35 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾಳೆ. ಸಾಲ ತೀರಿಸಲಾಗದೇ ಅಕ್ಕನ ಮಗಳನ್ನೇ ಮಾರಾಟ ಮಾಡಿದ್ದಾಳೆ ಮಹಿಳೆ. ವಿಷಯ ತಿಳಿದು ಚೌಡಮ್ಮ ತನ್ನ ಮಗಳನ್ನು ಕಳುಹಿಸುವಂತೆ ಆರೋಪಿ ಶ್ರೀರಾಮುಲುಗೆ ಕೇಳಿಕೊಂಡಿದ್ದಾರೆ. ಆದರೆ ಬಾಲಕಿಯನ್ನು ತಾನು ಖರೀದಿ ಮಾಡಿದ್ದಾಗಿ ಆತ ಹೇಳಿದ್ದಾನೆ. ಸಾಲದ ಹಣ ಕೊಟ್ಟು ಬಾಲಕಿಯನ್ನು ಕರೆದುಕೊಂಡು ಹೋಗಿ ಎಂದಿದ್ದಾನಂತೆ. ಬೇರೆ ದಾರಿ ಕಾಣದೇ ತುಮಕೂರಿಗೆ ವಾಪಾಸ್ ಆದ ಚೌಡಮ್ಮ, ಮಗಳ ಸ್ಥಿತಿ ಬಗ್ಗೆ ಕಾರ್ಮಿಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಎಚ್ಚೆತ್ತ ತುಮಕೂರು ಪೊಲೀಸರು ಬಾಲಕಿಯನ್ನು ರಕ್ಷಿಸಿ ಕರೆತಂದಿದ್ದು, ತುಮಕೂರು ಬಾಲ ಮಂದಿರದಲ್ಲಿ ಇರಿಸಿದ್ದಾರೆ.

ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಶ್ರೀರಾಮುಲು ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read