ಬಾಗಲಕೋಟೆ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಘಟಪ್ರಭಾ ನದಿಯಲ್ಲಿ ಪ್ರವಾಹವುಂಟಾಗಿದ್ದು, ನೂರಾರು ಗ್ರಾಮಗಳು ಜಲಾವೃತಗೊಂಡಿವೆ. ಹೊಲ-ಗದ್ದೆಗಳು ನದಿಯಂತಾಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಘಟಪ್ರಭಾ ನದಿ ಅಬ್ಬರಕ್ಕೆ ಹಿಡಕಲ್ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಘಟಪ್ರಭಾ ನದಿಯಲ್ಲಿ ಪ್ರವಾಹವುಂಟಾಗಿದ್ದು, ೮ ಬ್ಯಾರೇಜ್ ಗಳು ಸಂಪೂರ್ಣ ಮುಳುಗಡೆಯಾಗಿವೆ. ಇದರಿಂದಾಗಿ ಒಂದು ಗ್ರಾಮಗಳಿಂದ ಮತ್ತೊಂದು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.
ಮಿರ್ಚಿ ಬ್ಯಾರೆಜ್, ಚನ್ನಾಳ ಬ್ಯಾರೇಜ್, ನಾಗರಾಳ, ಜಾಲಿಬೇರಿ-ಸೊರಗಾಂವ, ಜಿರಗಾಳ-ಗುಲಗಲಜಂಬರಗಿ. ಅಂತಾಪುರ-ಜಂಬಗಿ ಕೆಡಿ, ಕಸಬಾ-ಇಂಗಳಗಿ, ಯಡಹಳ್ಳಿ-ಆಲಗುಂಡಿ, ಬಿ.ಕೆ ಬ್ಯಾರೇಜ್-ಜುನ್ನೂರು, ತಿಮ್ಮಾಪುರ-ಬಿದರಿ ಬ್ಯಾರೇಜ್ ಗಳು ಮುಳುಗಡೆಯಾಗಿವೆ.
ತಾಲೂಕಿನ ಮಾಚಕನೂರ ಗ್ರಾಮದ ಐತಿಹಾಸಿಕ ಹೊಳೆಬಸವೇಶ್ವರ ದೇವಸ್ಥಾನ ಜಲಾವೃತಗೊಂಡಿದೆ. ಪ್ರವಾಹ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಗಳಿಗೆ ಕಟ್ಟೆಚ್ಚರ ಘೋಷಿಸಲಾಗಿದೆ.