ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ ಆಚರಣೆ ಪೂರ್ಣಗೊಳ್ಳುವವರೆವಿಗೂ ಡಿ.ಜೆ ಸೌಂಡ್ ಸಿಸ್ಟಂ, ಹೆಚ್ಚಿನ ಶಬ್ಧ ಹೊರ ಸೂಸುವ ಧ್ವನಿವರ್ಧಕಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಟಿ.ವೆಂಕಟೇಶ್ ಆದೇಶಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಆಗಸ್ಟ್ 27ರಂದು ಹಿಂದೂ ಬಾಂಧವರು ಒಟ್ಟು 1,744 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು, ವಿವಿಧ ದಿನಾಂಕಗಳಂದು ವಿಸರ್ಜನೆ ಮಾಡಲಿದ್ದಾರೆ. ಸೆ.15 ರವರೆಗೆ ಒಟ್ಟು 20 ದಿನಗಳ ಕಾಲ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಮೆರವಣಿಗೆ ಮೂಲಕ ವಿಸರ್ಜನೆ ನಡೆಸಲಿದ್ದಾರೆ ಹಾಗೂ ಸೆ.05 ರಂದು ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು “ಈದ್ ಮಿಲಾದ್”ಹಬ್ಬವನ್ನು ಆಚರಿಸಲಿದ್ದಾರೆ. ಈ ಸಮಯದಲ್ಲಿ ಡಿಜೆ, ಹೆಚ್ಚಿನ ಶಬ್ದ ಹೊರ ಸೂಸುವ ಧ್ವನಿವರ್ಧಕಗಳನ್ನು ಬಳಸದಂತೆ ನಿಷೇಧಿಸಿ ಆದೇಶ ಹೊರಡಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರು ಕೋರಿರುತ್ತಾರೆ.
ಹೆಚ್ಚಿನ ಶಬ್ಧ ಹೊರಸೂಸುವ ಧ್ವನಿವರ್ಧಕಗಳನ್ನು ಉಪಯೋಗಿಸುವುದರಿಂದ ಗರ್ಭೀಣಿಯರಿಗೆ, ನವಜಾತ ಶಿಶುಗಳಿಗೆ, ಬಾಣಂತಿಯರಿಗೆ, ವಯೋವೃದ್ಧರಿಗೆ, ಹೃದಯ ಸಂಬಂಧಿ ಕಾಯಿಲೆ ಇರುವ ರೋಗಿಗಳಿಗೆ ಹಾಗೂ ಅನಾರೋಗ್ಯದ ನಿಮಿತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಸೇರಿದಂತೆ ಎಲ್ಲರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವುದರಿಂದ, ಗಣೇಶ ಉತ್ಸವ ಮೆರವಣಿಗೆ ಸಮಯದಲ್ಲಿ ಹಾಗೂ ಈದ್ ಮಿಲಾದ್ ಹಬ್ಬದ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಂಡು ಕೋಮು ಸೌಹಾರ್ದತೆಯನ್ನು ಕಾಪಾಡುವ ದೃಷ್ಠಿಯಿಂದ ಹಾಗೂ ಸಾರ್ವಜನಿಕ ಹಿತ ದೃಷ್ಠಿಯಿಂದ ಕರ್ನಾಟಕ ಪೊಲೀಸ್ ಅಧಿನಿಯಮ ಕಲಂ 36ರ ಮೇರೆಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ The Noise Pollution (regulation and Control) Rules 2000 & Environment (Pretection) Act-1986 ರನ್ವಯ ಇದೇ ಸೆಪ್ಟೆಂಬರ್ 15 ರವರೆಗೆ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯಲಿರುವ ಗಣಪತಿಯ ಶೋಭಯಾತ್ರೆ ಹಾಗೂ ವಿಸರ್ಜನಾ ಮೆರವಣಿಗೆ ಸಮಯದಲ್ಲಿ ಹಾಗೂ ಸೆ.05 ರ ಈದ್ ಮಿಲಾದ್ ಹಬ್ಬದ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಂಡು ಕೋಮು ಸೌಹಾರ್ದತೆ ಕಾಪಾಡುವ ದೃಷ್ಠಿಯಿಂದ ಚಿತ್ರದುರ್ಗ ಜಿಲ್ಲೆಯಾದ್ಯಂತ ಡಿ.ಜೆ ಸೌಂಡ್ ಸಿಸ್ಟಂ, ಅತಿ ಹೆಚ್ಚು ಶಬ್ದ ಹೊರಡಿಸುವ ಉಪಕರಣಗಳನ್ನು ಬಳಸದಂತೆ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಟಿ.ವೆಂಕಟೇಶ್ ಆದೇಶಿಸಿದ್ದಾರೆ.