ದಿಯೋಘರ್: ಜಾರ್ಖಂಡ್ ನ ದಿಯೋಘರ್ ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕನಿಷ್ಠ ಐವರು ಕನ್ವಾರಿಯಾಗಳು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಗಾಯಾಳುಗಳಲ್ಲಿ ಹಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವುನೋವುಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೋಹನಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜಮುನಿಯಾ ಅರಣ್ಯ ಪ್ರದೇಶದ ಬಳಿ ಕನ್ವಾರಿಯಾಗಳನ್ನು ಸಾಗಿಸುತ್ತಿದ್ದ ಬಸ್, ಗ್ಯಾಸ್ ಸಿಲಿಂಡರ್ ತುಂಬಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಈ ಘಟನೆ ಬೆಳಿಗ್ಗೆ 4:30 ರ ಸುಮಾರಿಗೆ ಸಂಭವಿಸಿದೆ.
ಇನ್ಸ್ಪೆಕ್ಟರ್ ಜನರಲ್(ದುಮ್ಕಾ ವಲಯ) ಶೈಲೇಂದ್ರ ಕುಮಾರ್ ಸಿನ್ಹಾ ಮಾಹಿತಿ ನೀಡಿ, ದಿಯೋಘರ್ ನ ಮೋಹನಪುರ ಪೊಲೀಸ್ ಠಾಣೆಯ ಜಮುನಿಯಾ ಅರಣ್ಯದ ಬಳಿ ಕನ್ವಾರಿಯಾಗಳನ್ನು ಸಾಗಿಸುತ್ತಿದ್ದ 32 ಆಸನಗಳ ಬಸ್ ಗ್ಯಾಸ್ ಸಿಲಿಂಡರ್ ತುಂಬಿದ್ದ ಟ್ರಕ್ಗೆ ಡಿಕ್ಕಿ ಹೊಡೆದು ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಾಗಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.