ಬೆಂಗಳೂರು: ‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂದು ವಿವಾದ ಸೃಷ್ಟಿಸಿದ್ದೂ ಅಲ್ಲದೇ, ತನ್ನ ಹೇಳಿಕೆಗೆ ಕನ್ನಡಿಗರ ಕ್ಷಮೆ ಕೇಳದೇ ಪದೇ ಪದೇ ಕ್ಷಮೆ ಕೇಳಲ್ಲ ಎಂದು ಉದ್ಧಟತನ ಮೆರೆಯುತ್ತಿರುವ ಬಹುಭಾಷಾ ನಟ ಕಮಲ್ ಹಾಸನ್ ವಿರುದ್ಧ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಯಾವುದೇ ಕಾರಣಕ್ಕೂ ಕಮಲ್ ಹಾಸನ್ ಸಿನಿಮಾ ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ.
ಇದರ ಬೆನ್ನಲ್ಲೇ ಕರ್ನಾಟಕ ಫಿಲ್ಮ್ ಚೇಂಬರ್ ಗೂ ಒತ್ತಡಗಳು ಹೆಚ್ಚಿದ್ದು, ಫಿಲ್ಮ್ ಚೇಂಬರ್ ಕೂಡ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳದಿದ್ದರೆ ಅವರ ಸಿನಿಮಾ ಬಿಡುಗಡೆಗೆ ಬಿಡುವುದಿಲ್ಲ ಎಂದು ಖಡಕ್ ಆಗಿ ಹೇಳಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು, ಕಮಲ್ ಹಾಸನ್ ಕನ್ನಡಿಗರಿಗೆ ನೋವುಂಟು ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಇದನ್ನು ಸಹಿಸಲ್ಲ. ಅವರು ಕ್ಷಮೆ ಕೇಳಲೇಬೇಕು. ಇಲ್ಲವಾದಲ್ಲಿ ಅವರ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಮಾಅಡಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಕಮಲ್ ಹಾಸನ್ ದುಬೈನಲ್ಲಿ ಇದ್ದಾರೆ ಎಂಬ ಮಾಹಿತಿ ಇದೆ. ಅವರು ನಾಳೆ ಬೆಳಿಗ್ಗೆ 11 ಗಂಟೆಗೆ ಚೆನ್ನೈಗೆ ಆಗಮಿಸುತ್ತಾರೆ. ಅವರಿಗೆ ನಾಳೆ 12 ಗಂಟೆಯವರೆಗೆ ಟೈಂ ಕೊಡಿ. ಅಲ್ಲಿಯವರೆಗೆ ಅವರು ಕ್ಷಮೆ ಕೇಳಲು ಕಾಲಾವಕಾಶ ನೀಡುವಂತೆ ವಿತರಕರು ಮನವಿ ಮಾಡಿದ್ದಾರೆ. ಈ ಬಗ್ಗೆ ಸಭೆ ನಡೆಸಿ ಮತ್ತೊಮ್ಮೆ ಚರ್ಚಿಸುತ್ತೇವೆ. ಆದರೆ ಅವರು ಕ್ಷಮೆ ಕೇಳಲೇಬೇಕು, ತಮ್ಮ ಹೇಳಿಕೆ ಹಿಂಪಡೆಯಬೇಕು. ಇಲ್ಲವಾದಲ್ಲಿ ಕರ್ನಾಟಕದಲ್ಲಿ ಅವರ ಸಿನಿಮಾ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಕೂಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು, ಕಮಲ್ ಹಾಸನ್ ಕ್ಷಮೆಗೆ ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಮುಲಾಜಿಲ್ಲದೇ ಅವರ ಸಿನಿಮಾಗಳನ್ನು ನಿಷೇಧಿಸಲು ಸೂಚಿಸಿದ್ದಾರೆ. ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಕ್ಷಮೆ ಕೇಳದಿದ್ದರೆ ಥಗ್ ಲೈಫ್ ಸಿನಿಮಾ ರಿಲೀಸ್ ಗೆ ಬಿಡಲ್ಲ ಎಂದು ಹೇಳಿದರು.