ಕಲುಷಿತ ಆಹಾರ ಸೇವಿಸಿ ದಂಪತಿ ಮೃತಪಟ್ಟ ಪ್ರಕರಣಕ್ಕೆ ಟ್ವಿಸ್ಟ್: ಪುತ್ರನಿಂದಲೇ ವಿಷಪ್ರಾಶನ

ಹಾಸನ: ಕಲುಷಿತ ಆಹಾರ ಸೇವಿಸಿ ದಂಪತಿ ಮೃತಪಟ್ಟ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪುತ್ರನೇ ವಿಷ ಉಣಿಸಿ ತಂದೆ, ತಾಯಿಯನ್ನು ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಹಾಸನ ಜಿಲ್ಲೆ ಅರಕಲಗೂಡು ತಾಲೂಕು ಕೊಣನೂರು ಹೋಬಳಿಯ ಬಿಸಿಲಹಳ್ಳಿಯಲ್ಲಿ ನಂಜುಂಡಪ್ಪ(55), ಉಮಾ(48) ವಿಷ ಸೇವಿಸಿ ಮೃತಪಟ್ಟ ದಂಪತಿಯಾಗಿದ್ದಾರೆ. ಪುತ್ರ ಮಂಜುನಾಥ್(27) ವಿಷ ಹಾಕಿದ ಆರೋಪ ಕೇಳಿ ಬಂದಿದೆ. ಮತ್ತೊಬ್ಬ ಪುತ್ರ ಜೈರಾಜ್ ಅಣ್ಣ ಮಂಜುನಾಥ್ ವಿರುದ್ಧ ದೂರು ನೀಡಿದ್ದಾರೆ.

ಮಂಜುನಾಥ ಮನೆ ನಿರ್ಮಿಸಲು ತಾಯಿಯ ಹೆಸರಲ್ಲಿ ಮಹಿಳಾ ಸಂಘಗಳಿಂದ ಹಾಗೂ ಕೆಲವರಿಂದ ಕೈ ಸಾಲ ಪಡೆದುಕೊಂಡಿದ್ದು, ಅದನ್ನು ತೀರಿಸಲು ಸಾಧ್ಯವಾಗಿರಲಿಲ್ಲ. ತಂದೆ, ತಾಯಿ ಬದುಕಿದ್ದರೆ ಸಾಲ ಕೇಳುತ್ತಾರೆ. ಅವರು ಮೃತಪಟ್ಟರೇ ಸಾಲ ಕೇಳುವುದಿಲ್ಲ ಎಂದು ಭಾವಿಸಿದ ಆತ ಆಗಸ್ಟ್ 15ರಂದು ಬೆಳಗ್ಗೆ 8 ಗಂಟೆಗೆ ಮನೆಯಲ್ಲಿ ಪಲಾವ್ ತಿಂದು ಉಳಿದ ತಿಂಡಿಗೆ ಕಳೆನಾಶಕ ಬೆರೆಸಿ ಹೋಗಿದ್ದಾನೆ.

ನಂತರ ತಂದೆ, ತಾಯಿಗೆ ಕರೆ ಮಾಡಿ, ನನಗೆ ವಾಂತಿಯಾಗುತ್ತಿದೆ. ತಿಂಡಿ ತಿನ್ನಬೇಡಿ ಎಂದು ತಿಳಿಸಿದ್ದಾನೆ. ಈ ವೇಳೆಗಾಗಲೇ ನಂಜುಂಡಪ್ಪ ಮತ್ತು ಉಮಾ ದಂಪತಿ ಪಲಾವ್ ತಿಂದಿದ್ದಾರೆ. ಅಸ್ವಸ್ಥರಾಗಿದ್ದ ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದು,  ಚಿಕಿತ್ಸೆ ಫಲಕಾರಿಯಾಗದೇ ಆಗಸ್ಟ್ 23ರಂದು ಮೃತಪಟ್ಟಿದ್ದರು.

ತಿಂಡಿಯಲ್ಲಿ ಕಳೆನಾಶಕ ಬೆರೆಸಿ ತಂದೆ, ತಾಯಿ ಕೊಲೆ ಮಾಡಿರುವ ಅಣ್ಣನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಮ್ಮ ಜೈರಾಜ್ ಕೊಣನೂರು ಠಾಣೆಗೆ ದೂರು ನೀಡಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದು, ವೈದ್ಯಕೀಯ ಪರೀಕ್ಷೆ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read