ಬೆಂಗಳೂರು: ಆನೆ ಮತ್ತು ಮಾನವ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಮಹತ್ವದ ಯೋಜನೆಯೊಂದನ್ನು ಜಾರಿಗೊಳಿಸಲು ಸಚಿವ ಸಂತೋಷ್ ಲಾಡ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ವೇಳೆ, ಆನೆ ಮತ್ತು ಮಾನವ ಸಂಘರ್ಷ ತಡೆಯಲು ಸಮರ್ಪಕ ಕ್ರಮಗಳನ್ನು ಕೈಗೊಳ್ಳಬೇಕು. ಆನೆ ಕಾರ್ಯಪಡೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಆನೆಗಳಿಗೆ ಸರಿಯಾದ ಆಹಾರ ಕಾಡಿನಲ್ಲೇ ಲಭ್ಯವಾಗುವಂತೆ ಮಾಡಬೇಕು. ಇದಕ್ಕೆ ಪೂರಕವಾಗಿ ಲಂಟಾನಾ ಕಳೆಗಳನ್ನು ತೆಗೆಯುವ ಕೆಲಸವಾಗಬೇಕು. ಇದೇ ರೀತಿ ಕುಡಿಯುವ ನೀರಿನ ಲಭ್ಯತೆಯೂ ಕಾಡಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಸಿಎಂ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಸಚಿವ ಸಂತೀಷ್ ಲಾಡ್ ಹನಿ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ರಾಜ್ಯದಲ್ಲಿ ಹಲವು ಕಡೆ ಮಾನವ ಪ್ರಾಣಿ ಸಂಘರ್ಷದ ವೇಳೆ ಪ್ರಾಣಹಾನಿ ಆಗಿರುವ ಬಗ್ಗೆ ಮತ್ತು ಇದಕ್ಕೆ ವೈಜ್ಞಾನಿಕ ಪರಿಹಾರ ಒದಗಿಸುವ ಬಗ್ಗೆ ಗಂಭೀರ ಚರ್ಚೆ ಸಭೆಯಲ್ಲಿ ನಡೆಯಿತು.
ಈ ವೇಳೆ ಸಚಿವ ಸಂತೋಷ್ ಲಾಡ್, “Honey fencing, ಜೇನು ಕೃಷಿ” ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರಿಸಿದರು. ಆನೆಗಳು ಜೇನು ನೊಣ ಇರುವ ಪ್ರದೇಶಕ್ಕೆ ಬರುವುದಿಲ್ಲ. ಹೀಗಾಗಿ ಆನೆ ಬ್ಯಾರಿಕೇಡ್ ಹಾಕಿರುವ ಮಾರ್ಗದುದ್ದಕ್ಕೂ ಜೇನು ಕೃಷಿ ಮಾಡಿದರೆ ರೈತರಿಗೂ ಅನುಕೂಲ, ಆನೆಗಳ ಕಾಟವೂ ತಪ್ಪುತ್ತದೆ ಎಂದು ವಿವರಿಸಿದರು.