‘ಗುಟ್ಕಾ’ ಉಗುಳಲು ಹೋಗಿ ಡ್ರೈವರ್ ಮಾಡಿದ ಎಡವಟ್ಟು: ಕಾರು ಪಲ್ಟಿಯಾಗಿ ಒಬ್ಬ ಸಾವು, ವಿಡಿಯೋ ವೈರಲ್ | Watch

ಬಿಲಾಸ್‌ಪುರ್‌ನಲ್ಲಿ ಸೋಮವಾರ ನಡೆದ ಭೀಕರ ರಸ್ತೆ ಅಪಘಾತವೊಂದು, ಚಾಲಕನ ನಿರ್ಲಕ್ಷ್ಯ ಮತ್ತು ದುರಭ್ಯಾಸದ ಅಪಾಯಕಾರಿ ಪರಿಣಾಮಗಳನ್ನು ಎತ್ತಿ ತೋರಿಸಿದೆ. ಅತಿ ವೇಗದಲ್ಲಿ ಸಾಗುತ್ತಿದ್ದ ಕಾರಿನ ಚಾಲಕ, ವಾಹನ ಚಲಾಯಿಸುತ್ತಲೇ ಗುಟ್ಕಾ ಉಗುಳಲು ಬಾಗಿಲು ತೆರೆದಿದ್ದಾನೆ. ಈ ಆಕಸ್ಮಿಕ ನಡೆಯಿಂದ ನಿಯಂತ್ರಣ ಕಳೆದುಕೊಂಡ ಕಾರು ಪಲ್ಟಿಯಾಗಿ ಭೀಕರ ಅಪಘಾತಕ್ಕೀಡಾಗಿದ್ದು, ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ.

ವರದಿಗಳ ಪ್ರಕಾರ, ಅಪಘಾತ ಸಂಭವಿಸಿದಾಗ ಇನೋವಾ ಕಾರು 100 ಕಿ.ಮೀ.ಗಿಂತಲೂ ಹೆಚ್ಚು ವೇಗದಲ್ಲಿ ಚಲಿಸುತ್ತಿತ್ತು. ಈ ಇಡೀ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಡಿವೈಡರ್‌ಗೆ ಡಿಕ್ಕಿ ಹೊಡೆದ ನಂತರ ಇನೋವಾ ಕಾರು ರಸ್ತೆಯ ಮೇಲೆ ಹಲವು ಬಾರಿ ಪಲ್ಟಿ ಹೊಡೆದು, ನಂತರ ಎರಡು ವಾಹನಗಳಿಗೆ ಅಪ್ಪಳಿಸುವುದು ಕಾಣಿಸುತ್ತದೆ. ವಿಡಿಯೋದಲ್ಲಿ, ಕಾರಿನಲ್ಲಿದ್ದ ಪ್ರಯಾಣಿಕರೊಬ್ಬರು ಹೊರಕ್ಕೆ ಎಸೆಯಲ್ಪಟ್ಟು ನೇರವಾಗಿ ಕಂಬಕ್ಕೆ ಅಪ್ಪಳಿಸುವ ಹೃದಯ ಕಲಕುವ ದೃಶ್ಯವೂ ಇದೆ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಅತಿ ವೇಗದ ವಾಹನ ಡಿಕ್ಕಿ ಹೊಡೆದ ಇತರ ಕಾರುಗಳ ಚಾಲಕರಲ್ಲಿ ಒಬ್ಬರಿಗೂ ಗಾಯಗಳಾಗಿವೆ. ಮೃತಪಟ್ಟ ವ್ಯಕ್ತಿಯನ್ನು ಚಕರ್ಭಾಥಾದ 31 ವರ್ಷದ ಬಟ್ಟೆ ವ್ಯಾಪಾರಿ ಜಾಕಿ ಎಂದು ಗುರುತಿಸಲಾಗಿದೆ. ಅವರು ಭಾನುವಾರ ತಡರಾತ್ರಿ ಬಿಲಾಸ್‌ಪುರದ ಹೊರವಲಯದಲ್ಲಿ ನಡೆದ ಪಾರ್ಟಿಯೊಂದರಿಂದ ವಾಪಸ್ ಬರುತ್ತಿದ್ದರು. ಅವರು ತಮ್ಮ ಸ್ನೇಹಿತ ಆಕಾಶ್ ಚಂದಾನಿಗೆ ರಾತ್ರಿ 1:30 ರ ಸುಮಾರಿಗೆ ತಮ್ಮನ್ನು ಪಿಕ್ ಅಪ್ ಮಾಡಲು ಕರೆ ಮಾಡಿದ್ದರು. ಆಕಾಶ್, ಮತ್ತೊಬ್ಬ ಸ್ನೇಹಿತ ಪಂಕಜ್ ಛಾಬ್ರಾ ಜೊತೆ ಇನೋವಾ ಕಾರಿನಲ್ಲಿ ಬಂದಿದ್ದರು.

ಪಂಕಜ್ ಮುಂದೆ ಪ್ರಯಾಣಿಕರ ಸೀಟಿನಲ್ಲಿ ಕುಳಿತಿದ್ದರೆ, ಆಕಾಶ್ ಚಾಲನೆ ಮಾಡುತ್ತಿದ್ದರು ಮತ್ತು ಜಾಕಿ ಹಿಂದಿನ ಸೀಟಿನಲ್ಲಿದ್ದರು. ಬಿಲಾಸ್‌ಪುರ್-ರಾಯ್‌ಪುರ್ ಹೆದ್ದಾರಿಯಲ್ಲಿ ಚಾಲನೆ ಮಾಡುತ್ತಿರುವಾಗ, ಆಕಾಶ್ ಇದ್ದಕ್ಕಿದ್ದಂತೆ ಗುಟ್ಕಾ ಉಗುಳಲು ಬಾಗಿಲು ತೆರೆದಿದ್ದಾನೆ. ಕ್ಷಣಾರ್ಧದಲ್ಲಿ ಅವನು ವಾಹನದ ನಿಯಂತ್ರಣವನ್ನು ಕಳೆದುಕೊಂಡಿದ್ದಾನೆ. ಇದರಿಂದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಹಲವಾರು ಬಾರಿ ಪಲ್ಟಿ ಹೊಡೆದು ಅಪ್ಪಳಿಸಿದೆ.

ಅತಿ ವೇಗದಲ್ಲಿ ಸಾಗುತ್ತಿದ್ದ ಕಾರು ರಸ್ತೆಯ ಮೇಲೆ ಅಪ್ಪಳಿಸಿದಾಗ, ಕಾರಿನಲ್ಲಿದ್ದ ಮೂವರೂ ಪ್ರಯಾಣಿಕರು ಹೊರಕ್ಕೆ ಎಸೆಯಲ್ಪಟ್ಟರು. ಜಾಕಿ ಅವರು ಕಾರಿನಿಂದ ಹೊರಕ್ಕೆ ಎಸೆಯಲ್ಪಟ್ಟು ಡಿವೈಡರ್ ಬಳಿಯ ಲೋಹದ ರಚನೆಗೆ ಅಪ್ಪಳಿಸಿದ್ದಾರೆ. ಪರಿಣಾಮವಾಗಿ ತಲೆ, ಎದೆ ಮತ್ತು ಭುಜಗಳಿಗೆ ಮಾರಣಾಂತಿಕ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಕಾಶ್ ಮತ್ತು ಪಂಕಜ್ ಕೂಡ ನೆಲಕ್ಕೆ ಅಪ್ಪಳಿಸಿ ತೀವ್ರ ಗಾಯಗೊಂಡಿದ್ದಾರೆ ಎಂದು ಟಿಒಐ ವರದಿ ತಿಳಿಸಿದೆ.

ಅಪಘಾತದ ನಂತರ ಸ್ಥಳದಲ್ಲಿದ್ದವರು ತುರ್ತು ಸೇವೆಗಳಿಗೆ ಮಾಹಿತಿ ನೀಡಿದ್ದು, ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರು ಪ್ರದೇಶವನ್ನು ಸುತ್ತುವರಿದು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read