ಬೆಂಗಳೂರು: ದಿಯಾ ಚಿತ್ರದ ನಿರ್ಮಾಪಕ ಕೃಷ್ಣ ಚೈತನ್ಯ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ವರ್ತೂರು ಬಳಿಯ ಕಸವನಹಳ್ಳಿ ಬಳಿಯ ಜಮೀನು ಒಡೆತನದ ವಿಚಾರವಾಗಿ ಬೆಳ್ಳಂದೂರು ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಸಿನಾಪ್ಸೆ ಕನ್ ಸ್ಟ್ರಕ್ಷನ್ ಪ್ರೈವೆಟ್ ಲಿಮಿಟೆಡ್ ನ ಕೃಷ್ಣ ಚೈತನ್ಯ, ಸಚಿನ್ ನಾರಾಯಣ್ ಹಾಗೂ ಸಹಚರರು ಕಸವನಹಳ್ಳಿ ಗ್ರಾಮದ ಸರ್ವೆ ನಂಬರ್ 52ರಲ್ಲಿನ 3 ಎಕರೆ 35 ಗುಂಟೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಆ ಜಮೀನು ತಮಗೆ ಸೇರಿದ್ದು. ಆದರೆ ಕೃಷ್ಣ ಚೈತನ್ಯ ಹಾಗೂ ಸಹಚರರು ನಮ್ಮನ್ನು ಬೆದರಿಸಿ, ಅವಾಚ್ಯವಾಗಿ ನಿಂದಿಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ರಾಮಮೂರ್ತಿ ಎಂಬುವವರು ಬೆಳ್ಳಂದೂರು ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಕೃಷ್ಣ ಚೈತನ್ಯ, ರಾಮಮೂರ್ತಿ, ಸತೀಶ್, ಸುನಿಲ್, ಶಿವರಾಮರೆಡ್ಡಿ, ರಾಘವೇಂದ್ರ ಎಂಬುವವರ ವಿರುದ್ಧ ದೂರು ನೀಡಿದ್ದಾರೆ. ದೂರು ಹಾಗೂ ಪ್ರತಿದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ.