ಮಂಗಳೂರು: ಲಂಚಕ್ಕೆ ಕೈಯೊಡ್ದಿ ಲೋಕಾಯುಕ್ತ ಬಲೆಗೆ ಬಿದ್ದು ಜೈಲು ಸೇರಿದ್ದ ದಕ್ಷಿಣ ಕನ್ನಡ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಡಿಡಿ, ಜಾಮೀನು ಮೇಲೆ ಹೊರ ಬಂದು ಕಚೇರಿಯಲ್ಲಿ ದರ್ಬಾರ್ ನಡೆಸುತ್ತಿದ್ದರು. ಸಾರ್ವಜನಿಕರ ದೂರಿನ ಮೇರೆಗೆ ಮಹಿಳಾ ಅಧಿಕಾರಿಯನ್ನು ಅಮಾನತುಗೊಳಿಸಿರುವ ಘಟನೆ ನಡೆದಿದೆ.
ಕೃಷ್ಣವೇಣಿ ಅಮಾನತುಗೊಂಡಿರುವ ಅಧಿಕಾರಿ. ಡಿಡಿ ಕೃಷ್ಣವೇಣಿ ಮೇಲೆ ಎರಡನೇ ಬಾರಿ ಲೋಕಾಯುಕ್ತ ದಾಳಿ ನಡೆದಿತ್ತು. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಅವರು ಜೈಲು ಸೇರಿದ್ದರು. ಲೋಕಾಯುಕ್ತ ದಾಅಳಿ ವೇಳೆ 12 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿತ್ತು. ಇತ್ತೀಚೆಗೆ ಉಳ್ಳಾಲದ ಇರಾ ಗ್ರಾಮದ ವ್ಯಕ್ತಿಯೊಬ್ಬರಿಂದ 50 ಸಾವಿರ ಲಂಚಪಡೆಯುವಾಗ ಸಿಕ್ಕಿಬಿದ್ದು ಲೋಕಾಯುಕ್ತ ಬಂಧನಕ್ಕೊಳಗಾಗಿ ಜೈಲು ಸೇರಿದ್ದ ಕೃಷ್ಣವೇಣಿ, 18 ದಿನಗಳ ಬಳಿಕ ಜಾಮೀನು ಮೇಲೆ ಹೊರಬಂದು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು.
ಸರ್ಕಾರದ ನಿಯಮಗಳ ಪ್ರಕರ 48 ಗಂಟೆಗಿಂತ ಹೆಚ್ಚು ಕಾಲ ಪೊಲೀಸ್ ಕಸ್ಟಡಿಯಲ್ಲಿರುವ ಯಾವುದೇ ಅಧಿಕಾರಿಯನ್ನು ಅಮಾನತುಗೊಳಿಸಲಾಗುತ್ತದೆ. ಆದರೆ ಕೃಷ್ಣವೇಣಿ 18 ದಿನಗಳ ಕಾಲ ಜೈಲಿನಲ್ಲಿದ್ದರೂ ಈ ನಿಯಮ ಪಾಲನೆಯಾಗಿರಲಿಲ್ಲ. ಅಲ್ಲದೇ ಅವರು ಕೋರ್ಟ್ ನಿಂದ ಸ್ಟೇ ತಂದಿದ್ದರು. ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದ ಅಧಿಕಾರಿ ಕಚೇರಿಯಲ್ಲಿ ದರ್ಬಾರ್ ನಡೆಸುತ್ತಿದ್ದರು. ಇದು ಸಾರ್ವಜನಿಕರ ಟೀಕೆಗೆ ಗುರಿಯಾಗಿತ್ತು. ಇದೀಗ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡೂರಾವ್ ಗಮನಕ್ಕೆ ಬಂದಿದ್ದು, ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಕೃಷ್ಣವೇಣಿಯನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.