ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಮನೆ ಮೇಲೆ ಗುಡ್ಡ ಕುಸಿದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, ದುರಂತದಲ್ಲಿ ತನ್ನ ಎರಡೂ ಮಕ್ಕಳನ್ನು ಕಳೆದುಕೊಂಡಿರುವ ಮಹಿಳೆ ಎರಡೂ ಕಾಲುಗಳನ್ನು ಕೂಡ ಕಳೆದುಕೊಂಡು ನರಳಾಡುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಧಾರಾಕಾರ ಮಳೆಗೆ ಉಳ್ಳಾಲದ ಉರುಮನೆ ಕೋಡಿ ಎಂಬಲ್ಲಿ ಮನೆ ಮೇಲೆ ಗುಡ್ಡ ಕುಸಿದು ದುರಂತ ಸಂಭವಿಸಿತ್ತು. ಘಟನೆಯಲ್ಲಿ ಮಹಿಳೆ ಅಶ್ವಿನಿ ಪೂಜಾರಿ ಅವರ ಇಬ್ಬರು ಪುಟ್ಟ ಮಕ್ಕಳು ಹಾಗೂ ಅತ್ತೆ ಪ್ರೇಮಾ ಪೂಜಾರಿ ಸಾವನ್ನಪ್ಪಿದ್ದರು. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಅಶ್ವಿನಿ ಅವರನ್ನು ಎಸ್.ಡಿ.ಆರ್.ಎಫ್, ಎನ್.ಡಿ.ಆರ್.ಎಫ್ ತಂಡ ಸತತ ಹತ್ತುಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹೊರತೆಗೆದಿತ್ತು.
ಗಂಭೀರವಾಗಿ ಗಾಯಗೊಂಡಿದ್ದ ಅಶ್ವಿನಿಯವರನ್ನು ಮಂಗಳೂರಿನ ದೇರಳಕಟ್ಟ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಶ್ವಿನಿ ಅವರ ಎರಡು ಕಾಲುಗಳು ಸಂಪೂರ್ಣವಾಗಿ ಸ್ವಾಧೀನ ಕಳೆದುಕೊಂಡಿದ್ದವು. ಹೀಗಾಗಿ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಅಶ್ವಿನಿ ಅವರ ಎರಡೂ ಕಾಲುಗಳನ್ನು ತೆಗೆದಿದ್ದಾರೆ.
ಅಶ್ವಿನಿ ಅವರ ಒಂದು ಕಾಲಿನ ಪಾದದ ಭಾಗ ತುಂಡಾಗಿತ್ತು. ಮತ್ತೊಂದು ಕಾಲು ಸಂಪೂರ್ಣ ಸ್ವಾಧೀನ ಕಳೆದುಕೊಂಡಿತ್ತು. ಹಾಗಾಗಿ ಕಾಲನ್ನು ಕತ್ತರಿಸಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಶ್ವಿನಿಗೆ ಇನ್ನೂ ತನ್ನ ಇಬ್ಬರು ಮಕ್ಕಳು ಗುಡ್ಡ ಕುಸಿತದಲ್ಲಿ ಸಾವನ್ನಪ್ಪಿರುವ ಬಗ್ಗೆ ತಿಳಿದಿಲ್ಲ. ಇಬ್ಬರು ಮಕ್ಕಳ ಕನವರಿಕೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.