ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮನೆ ಮೇಲೆ ಗುಡ್ಡ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಉರುಮನೆ ಕೋಡಿ ಎಂಬಲ್ಲಿ ಕಾಂತಪ್ಪ ಪೂಜಾರಿ ಎಂಬುವವರ ಮನೆ ಮೇಲೆ ಗುಡ್ದ ಕುಸಿದು ಬಿದ್ದು, ಅವಶೇಷಗಳ ಅಡಿಯಲ್ಲಿ ಕುಟುಂಬದ ಐವರು ಸಿಲುಕಿದ್ದರು. ಇಂದು ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಈ ಪ್ರದೇಶಕ್ಕೆ ತೆರಳಲು ರಸ್ತೆ ಮಾರ್ಗವಾಗಲಿ, ಸಂಪರ್ಕ ವ್ಯವಸ್ಥೆಯಾಗಲಿ ಸರಿಯಾಗಿ ಇಲ್ಲದ ಕಾರಣ ಹಾಗೂ ಧಾರಾಕಾರವಾಗಿ ಸುರುಯುತ್ತಲೇ ಇರುವ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆ ವಿಳಂಬವಾಗಿದೆ.
ಮಣ್ಣಿನಡಿ ಸಿಲುಕಿದ್ದ ತಾಯಿ ಹಾಗೂ ಇಬ್ಬರು ಮಕ್ಕಳ ರಕ್ಷಣೆಗಾಗಿ ಎಸ್ ಡಿ ಆರ್ ಎಫ್ ಹರಸಾಹಸ ಪಡುತ್ತಿದ್ದು, ಆಕ್ಸಿಜನ್ ಪೂರೈಕೆ ಮಾಡಲಾಗಿದೆ. ಆದರೆ ಮಣ್ಣಿನಡಿ ಸಿಲುಕಿದ್ದ ಓರ್ವ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ. ತಾಯಿ ಹಾಗೂ ಇನ್ನೋರ್ವ ಮಗುವಿನ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಮನೆಯ ಅವಶೇಷಗಳಡಿ ಸಿಲುಕಿದ್ದ ಮತ್ತೋರ್ವ ಮಹಿಳೆ ಪ್ರೇಮಾ ಪೂಜಾರಿ ಕೂಡ ಸಾವನ್ನಪ್ಪಿದ್ದರು. ಮಳೆಯ ನಡುವೆಯೇ ಮಣ್ಣಿನಡಿ ಸಿಲುಕಿಕೊಂಡಿರುವ ತಾಯಿ ಹಾಗೂ ಕಂದನ ರಕ್ಷಣೆಗಾಗಿ ಎಸ್ ಡಿ ಆರ್ ಎಫ್ ತಂಡ ಹರಸಾಹಸ ಪಡುತ್ತಿದೆ.