ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ 200 ಕೋಟಿ ರೂಪಾಯಿ ವೆಚ್ಚದಲ್ಲಿ 200 ಅಡಿ ಎತ್ತರದ ಡಾ. ಬಿ.ಆರ್. ಅಂಬೇಡ್ಕರ್ ಅವರ ಬೃಹತ್ ಪ್ರತಿಮೆ ಒಳಗೊಂಡ ಅಂಬೇಡ್ಕರ್ ಥೀಮ್ ಪಾರ್ಕ್ ಮತ್ತು ಸಂವಿಧಾನ ಮ್ಯೂಸಿಯಂ ಸ್ಥಾಪನೆ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ಸಂಜೆ ಸಭೆ ನಡೆಸಲಾಗಿದೆ.
ಬಜೆಟ್ ನಲ್ಲಿ 200 ಕೋಟಿ ರೂಪಾಯಿ ವೆಚ್ಚದಲ್ಲಿ ಅಂಬೇಡ್ಕರ್ ಮತ್ತು ಸಂವಿಧಾನ ಮ್ಯೂಸಿಯಂ ಸ್ಥಾಪಿಸುವುದಾಗಿ ಘೋಷಿಸಲಾಗಿತ್ತು.
ಬೆಂಗಳೂರು ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆ ಮತ್ತು ಬೆಂಗಳೂರು ವಿವಿ ಜೊತೆಗೆ ಈ ಕುರಿತಾಗಿ ಚರ್ಚಿಸಿದ್ದು, ಬೆಂಗಳೂರು ವಿವಿ ಜ್ಞಾನ ಭಾರತೀಯ ಮುಖ್ಯದ್ವಾರದಿಂದ ಎನ್.ಎಸ್.ಎಸ್. ಕೇಂದ್ರ ಮಧ್ಯ ಭಾಗದಲ್ಲಿ ಲಭ್ಯವಿರುವ 25 ಎಕರೆ ಜಾಗ ಸೂಕ್ತ ಎಂದು ನಿರ್ಧರಿಸಲಾಗಿದೆ.
ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ. ಮಹದೇವಪ್ಪ, ಉನ್ನತ ಶಿಕ್ಷಣ ಇಲಾಖೆ ಸಚಿವ ಎಂ.ಸಿ. ಸುಧಾಕರ್ ಸೇರಿದಂತೆ ಹಲವರು ಸಭೆಯಲ್ಲಿ ಹಾಜರಿದ್ದರು.
ಥೀಮ್ ಪಾರ್ಕ್ ನಲ್ಲಿ ಅಂಬೇಡ್ಕರ್ ಅವರ 200 ಅಡಿ ಎತ್ತರದ ಪ್ರತಿಮೆ, ಅಂಬೇಡ್ಕರ್ ಅವರ ಬದುಕು –ಬರಹ, ಸಾಧನೆ, ಭಾರತ ಸಂವಿಧಾನ ರಚನೆಯ ಇತಿಹಾಸದ ಬಗ್ಗೆ ಮ್ಯೂಸಿಯಂ ಸ್ಥಾಪಿಸಲಾಗುವುದು. ಅಂಬೇಡ್ಕರ್ ಸ್ಮಾರಕ ಬೃಹತ್ ಗ್ರಂಥಾಲಯ, ಬೌದ್ಧ ಸ್ತೂಪಗಳು, ವಿವಿಧ ಶಿಲ್ಪ ಕಲಾಕೃತಿಗಳು, ಕಾನ್ಫರೆನ್ಸ್ ಹಾಲ್, ಮಿನಿ ಥಿಯೇಟರ್, ಉದ್ಯಾನವನ, ಸಂಗೀತ ಕಾರಂಜಿ ನಿರ್ಮಿಸಲು ಉದ್ದೇಶಿಸಲಾಗಿದೆ.