ಕೋಲಾರ : ‘ಆಪರೇಷನ್ ಸಿಂಧೂರ್’ ಬಗ್ಗೆ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಭಾರಿ ಟೀಕೆಗೆ ಕಾರಣವಾಗಿದೆ.
ಪಾಕಿಸ್ತಾನದ ಉಗ್ರರ ವಿರುದ್ಧ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಹೀಗಿರುವಾಗ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್, ನಾಲ್ಕು ಫೈಟ್ ಕಳುಹಿಸಿದ್ದು ಬಿಟ್ರೆ ಏನೂ ಮಾಡಿಲ್ಲ ಎಂದು ಹೇಳುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 26 ಜನ ಮಹಿಳೆಯರ ಅರಿಷಿಣ ಕುಂಕುಮಕ್ಕೆ ಬೆಲೆ ಇಷ್ಟೇನಾ? ಆ ಹೆಣ್ಣುಮಕ್ಕಳಿಗೆ ಸಿಕ್ಕ ಪರಿಹಾರ ಇದೇನಾ? ಸಾಮಾನ್ಯ ಜನರ ಮೇಲೆ ಯುದ್ಧ ಮಾಡುವುದಕ್ಕೆ ನಮ್ಮ ವಿರೋಧವಿದೆ. ಆದರೆ ನಮ್ಮ ದೇಶಕ್ಕೆ ನುಗ್ಗಿ ಪತ್ನಿಯರ ಎದುರೇ ಗಂಡಂದಿರನ್ನು ಹೊಡೆದ್ರೆ ಹೇಗೆ ಸಹಿಸುವುದು? ಆ ಹೆಣ್ಣುಮಕ್ಕಳು ಗಟ್ಟಿಯಾಗಿರೋದಿಕ್ಕೆ ಪರವಾಗಿಲ್ಲ ಇಲ್ಲಾ ಅಂದ್ರೆ ಹಾರ್ಟ್ ಅಟ್ಯಾಕ್ ಆಗಿ ಸಾಯಬೇಕಿತ್ತು. ಇಂತಹ ಕೃತ್ಯಕ್ಕೆ ಪರಿಹಾರ ಇದಲ್ಲ. ಬೇರಿಂದ ಕೊಂಬೆತನಕ ಎಲ್ಲವನ್ನೂ ಹೊಡೆಯಬೇಕು. ಭಾರತಕ್ಕೆ ಒಳ್ಳೆಯ ಅವಕಾಶವಿದ್ದರೂ ಏನೂ ಮಾಡಿಲ್ಲ ಎಂದಿದ್ದಾರೆ.
ಕನ್ಫರ್ಮ್ ಆಗಿ 100 ಜನರನ್ನು ಹೊಡೆದಿದ್ದಾರೆ ಎಂದು ಯಾರದರೂ ಹೇಳಿದ್ರಾ?. ಎಲ್ಲೂ ಹೇಳಿಲ್ಲ. ಪಹಲ್ಗಾಮ್ ಗಡಿಯಲ್ಲಿ ಬಂದ ಉಗ್ರರು ಎಲ್ಲಿ, ಎಲ್ಲಿ ಹೋಗಿದ್ದಾರೆ, ಅವರು ಯಾರು. ಅವರು ಹೇಗೆ ತಪ್ಪಿಸಿಕೊಂಡು ಹೋದರು. ಗಡಿಯಲ್ಲಿ ನಮ್ಮವರು ಯಾರು ಇಲ್ವಾ?. ಇವರೆ ಏನಾದರೂ ಪ್ಲಾನ್ ಮಾಡಿ ಅವರನ್ನು ಒಳಗೆ ಕರೆಸಿಕೊಂಡ್ರಾ?.
ಆಪರೇಷನ್ ಸಿಂಧೂರ್ ಹೆಸರಲ್ಲಿ ನೂರು ಉಗ್ರರನ್ನು ಹೊಡೆದ್ವಿ, ಅಷ್ಟು ಉಗ್ರರನ್ನು ಕೊಂದ್ವಿ ಅಂತಾರೆ. ಆದ್ರೆ ಇಲ್ಲಿಯವರೆಗೂ ಎಲ್ಲೂ ಕನ್ಫರ್ಮ್ ಇಲ್ಲ ಮಾಧ್ಯಮಗಳಲ್ಲಿ ಬಂದಿದ್ದು ಬಿಟ್ರೆ ಬೇರೆಲ್ಲೂ ನೋಡಿಲ್ಲ ಎಂದು ಹೇಳಿದ್ದಾರೆ.
ನಮ್ಮ ದೇಶಕ್ಕೆ ಬಂದು ನಮ್ಮನ್ನು ಹೊಡೆದು ಹೋಗ್ತಾರೆ ಅಂದ್ರೆ ನಮ್ಮ ಭದ್ರತಾ ವೈಫಲ್ಯ, ಗಡಿಯಲ್ಲಿ ಸೇನೆ ಏನು ಮಾಡ್ತಾ ಇತ್ತು? ಇವರೇ ಏನಾದ್ರೂ ಪ್ಲಾನ್ ಮಾಡಿದ್ರಾ? ಯಾವುದು ನಿಜ, ಯಾವುದು ಸುಳ್ಲು? ನಮಗೆ ಗೊತ್ತಿಲ್ಲ. ಆದ್ರೆ ಭಾರತ ಕೊಟ್ಟ ಉತ್ತರ ಸಮಾಧಾನಕರ ಕ್ರಮವಲ್ಲ ಎಂದಿದ್ದಾರೆ.