ಬೆಂಗಳೂರು: ವಿವಿಧ ಯೋಜನೆಗಳಿಗೆ ಭೂಸ್ವಾಧೀನ ಮಾಡಿಕೊಂಡಾಗ ಭೂ ಮಾಲೀಕರ ಖಾತೆಗೆ ನಿಗದಿತ ಪರಿಹಾರದ ಮೊತ್ತ ಠೇವಣಿ ಇಡುವುದು ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ಜಿಲ್ಲಾಧಿಕಾರಿಯವರ ಕರ್ತವ್ಯ ಎಂದು ಹೈಕೋರ್ಟ್ ತಿಳಿಸಿದೆ.
ಆಲಮಟ್ಟಿ ಡ್ಯಾಂ ಎತ್ತರಿಸುವುದರಿಂದ ಮುಳುಗುವ ಬಾಗಲಕೋಟೆಯ ಗದ್ದನಕೇರಿಯ ಫ್ಲ್ಯಾಟ್ ವೊಂದರ ಮಾಲೀಕ ಲೋಕಣ್ಣ ಸೇರಿದಂತೆ ಇತರರು ಸಲ್ಲಿಸಿದ್ದ ನ್ಯಾಯಿಕ ಪರಮಾದೇಶ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠದಿಂದ ಈ ಆದೇಶ ನೀಡಲಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ, ಕೃಷ್ಣಾ ಭಾಗ್ಯ ಜಲ ನಿಗಮದಿಂದ ಜಾರಿಗೊಳಿಸುತ್ತಿರುವ ಯೋಜನೆಗಾಗಿ 2021ರಲ್ಲಿ ಜಾಗ ಸ್ವಾಧೀನಪಡಿಸಿಕೊಂಡು 2023ರಲ್ಲಿ ಅಂತಿಮ ಆದೇಶ ಹೊರಡಿಸಲಾಗಿತ್ತು. ಜಮೀನು ಕಳೆದುಕೊಂಡ ಲೋಕಣ್ಣ ಇತರರಿಗೆ ಪರಿಹಾರ ನೀಡಿರಲಿಲ್ಲ. ಯೋಜನೆಗಾಗಿ ತಾವು ಕಳೆದುಕೊಂಡಿರುವ ಫ್ಲ್ಯಾಟ್ ಗಳಿಗೆ ಪರಿಹಾರ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ಲೋಕಣ್ಣ ಮತ್ತಿತರರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಮಾಲೀಕತ್ವ ವಿವಾದ ಸೇರಿ ವಿಶೇಷ ಪ್ರಕರಣ ಹೊರತುಪಡಿಸಿದಂತೆ ಉಳಿದೆಲ್ಲ ಸಂದರ್ಭದಲ್ಲಿ ಭೂಮಿ ಕಳೆದುಕೊಂಡವರ ಖಾತೆಗೆ ಪರಿಹಾರ ಮೊತ್ತ ಜಮೆ ಮಾಡಬೇಕು. ಪರಿಹಾರ ಮೊತ್ತದ ವಿಚಾರದಲ್ಲಿ ವ್ಯಾಜ್ಯವಿದ್ದರೂ ಆ ಮೊತ್ತವನ್ನು ಭೂ ಮಾಲೀಕರ ಖಾತೆಯಲ್ಲಿ ಜಮಾ ಮಾಡಬೇಕು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಂಬಂಧಿಸಿದವರು ಮೇಲ್ಮನವಿ ಪ್ರಾಧಿಕಾರ, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸದೆ ಇದ್ದಾಗ ಅವರು ಪರಿಹಾರ ಮೊತ್ತ ಒಪ್ಪಿಕೊಂಡಂತೆ ಆಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಆದೇಶ ಪ್ರಕಟವಾದ ನಾಲ್ಕು ವಾರದೊಳಗೆ ಸಂತ್ರಸ್ತ ಅರ್ಜಿದಾರರಿಗೆ ಬಡ್ಡಿ ಸಹಿತ ಪರಿಹಾರ ಪಾವತಿಸಬೇಕೆಂದು ಹೈಕೋರ್ಟ್ ಆದೇಶಿಸಿದೆ.