ಚಿಕ್ಕಮಗಳೂರು: ಕೌಟುಂಬಿಕ ಕಲಹದಲ್ಲಿ ಪತಿ ಮಹಾಶಯನೊಬ್ಬ ಪತ್ನಿಯನ್ನು ಕಬ್ಬಿಣದ ಪೈಪ್ ನಿಂದ ಮನಬಂದಂತೆ ಹೊಡೆದು ಹತ್ಯೆಗೈದಿರುವ ಘೋರ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸದ ಮರಸಣಿಗೆ ಗ್ರಾಮದಲ್ಲಿ ನಡೆದಿದೆ.
32 ವರ್ಷದ ಮಂಜುಳಾ ಪತಿಯಿಂದ ಕೊಲೆಯಾದ ಮಹಿಳೆ. ದಂಪತಿ ಕಳಸ ತಾಲೂಕಿನ ಯಮಗೊಂಡ ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಾಗಿದ್ದರು. ಪತಿ-ಪತ್ನಿ ನಡುವೆ ಪ್ರತಿದಿನ ಜಗಳಮ್ ಗಲಾಟೆ ನಡೆಯುತ್ತಿತ್ತು. ದಂಪತಿ ನಡುವಿನ ಗಲಾಟೆ, ಜಗಳ ನೋಡಿ ನೋಡಿ ಬೇಸತ್ತ ತೋಟಗಾರ ಕೆಲಸಕ್ಕೆ ಬರುವುದು ಬೇಡ ಎಂದು ಹೇಳಿದ್ದರಂತೆ. ಕೆಲಸವೂ ಇಲ್ಲದಿದ್ದಾಗ ಗಂಡ-ಹೆಂಡತಿ ಕಲಹ ಮತ್ತಷ್ಟು ಜೋರಾಗಿದೆ.
ಜಗಳ ವಿಕೋಪಕ್ಕೆ ತಿರುಗಿ ಪತಿ ಕಬ್ಬಿಣದ ಪೈಪ್ ನಿಂದ ಪತ್ನಿ ಮಂಜುಳಾ ತಲೆಗೆ ಹೊಡೆದಿದ್ದಾನೆ. ಗಂಭೀರವಾಗಿ ಹಲ್ಲೆಗೊಳಗಾದ ಪತ್ನಿ ಪ್ರಜ್ಞೆತಪ್ಪಿದ್ದಾಳೆ. ಆಕೆಯನ್ನು ಕಳಸ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾಳೆ.
ಪತ್ನಿ ಕೊಲೆಗೈದ ಆರೋಪದಲ್ಲಿ ಪತಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
