ನವದೆಹಲಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಚೈತನನ್ಯಾನಂದ ಸ್ವಾಮೀಜಿಯ ಮೂವರು ಆಪ್ತ ಸಹಾಯಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಅಸೋಸಿಯೇಟ್ ಡೀನ್ ಶ್ವೇತಾ ಶರ್ಮಾ, ಕಾರ್ಯನಿರ್ವಾಹಕಾ ನಿರ್ದೇಶಕಿ ಭಾವನಾ ಕಪಿಲ್ ಹಾಗೂ ಹಿರಿಯ ಅಧ್ಯಾಪಕಿ ಕಾಜಲ್ ಬಂಧಿತ ಆರೋಪಿಗಳು. ಈ ಮೂವರು ಸ್ವಾಮೀಜಿ ನಿರ್ದೇಶನದ ಮೇರೆಗೆ ವಿದ್ಯಾರ್ಥಿನಿಯರ ಮೇಲೆ ಒತ್ತಡ ಹಾಕುತ್ತಿದ್ದರು. ಅಪರಾಧ ಕೃತ್ಯಕ್ಕೆ ಪ್ರಚೋದನೆ, ದೂರುದಾರರಿಗೆ ಬೆದರಿಕೆ, ಸಾಕ್ಷ್ಯನಾಶಪಡಿಸಿದ ಆರೋಪದಲ್ಲಿ ಮೂವರನ್ನು ಬಂಧಿಸಲಾಗಿದೆ.
ವಿಚಾರಣೆ ವೇಳೆ ಮೂವರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ವಿದ್ಯಾರ್ಥಿನಿಯರ ಜೊತೆ ಸ್ವಾಮೀಜಿ ತಂಗಿದ್ದ ಎನ್ನಲಾದ ಉತ್ತರಾಖಂಡದ ಅಲ್ಮೋರಾದಲ್ಲಿರುವ ಅತಿಥಿ ಗೃಹಕ್ಕೆ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.