ನವದೆಹಲಿ: ರೈತರ ಆದಾಯ ಹೆಚ್ಚಿಸಲು ರೈತರಿಂದಲೇ ನೇರವಾಗಿ ಉತ್ಪನ್ನಗಳನ್ನು ಖರೀದಿಸಿ ಮಧ್ಯವರ್ತಿಗಳಿಂದ ಖರೀದಿಸಬೇಡಿ ಎಂದು ಕೇಂದ್ರ ಸರ್ಕಾರ ಎಲ್ಲಾ ಹೋಟೆಲ್ ಮಾಲೀಕರಿಗೆ ಸಲಹೆ ನೀಡಿದೆ.
ಕೃಷಿ ಇಲಾಖೆಯ ಕಾರ್ಯದರ್ಶಿ ದೇವೇಶ್ ಚತುರ್ವೇದಿ ಅವರು ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಬೆಳೆಗಾರರ ಆದಾಯ ಹೆಚ್ಚಿಸಲು ರೈತ ಉತ್ಪಾದಕ ಸಂಸ್ಥೆಗಳಿಂದ(FPO) ನೇರವಾಗಿ ಉತ್ಪನ್ನಗಳನ್ನು ಖರೀದಿಸಿ. ದೇಶಾದ್ಯಂತ ಸಾಕಷ್ಟು ಸಂಖ್ಯೆಯ ಹೋಟೆಲ್, ರೆಸ್ಟೋರೆಂಟ್ ಗಳು ಇವೆ. ಸಾಧ್ಯವಾದರೆ ಆಹಾರ, ತರಕಾರಿಗಳು, ಮಸಾಲೆ ಪದಾರ್ಥಗಳು ಮತ್ತು ಇತರೆ ವಸ್ತುಗಳನ್ನು ಸ್ಥಳೀಯ ಕೃಷಿಕರಿಂದಲೇ ಖರೀದಿಸಿ. ಸ್ಥಳೀಯ ಮಂಡಿಗಳಿಂದ ಅಥವಾ ಚಿಲ್ಲರೆ ವ್ಯಾಪಾರಿಗಳ ಬಳಿ ಖರೀದಿಸುವುದಕ್ಕಿಂತ ರೈತ ಉತ್ಪಾದಕ ಸಂಸ್ಥೆಗಳಿಂದ ನೇರವಾಗಿ ಖರೀದಿಸಲು ಪ್ರಾರಂಭಿಸಿ ಎಂದು ಸಲಹೆ ನೀಡಿದ್ದಾರೆ.
ಕೃಷಿಕರೊಂದಿಗಿನ ನೇರ ಪಾಲುದಾರಿಕೆ ಬೆಲೆಯ ಅಂತರವನ್ನು ಕಡಿಮೆ ಮಾಡುತ್ತದೆ. ಸರ್ಕಾರಿ ಯೋಜನೆಯಡಿ ಸ್ಥಾಪಿಸಿರುವ 10,000 ರೈತ ಉತ್ಪಾದಕ ಸಂಸ್ಥೆಗಳು ಸೇರಿದಂತೆ ದೇಶಾದ್ಯಂತ 35000 ರೈತ ಉತ್ಪಾದಕ ಸಂಸ್ಥೆಗಳು ಇವೆ. ಈ ಹಿನ್ನೆಲೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕೇಂದ್ರ ಸರ್ಕಾರ ರೈತ ಉತ್ಪಾದಕ ಸಂಸ್ಥೆಗಳ ಪ್ರೋತ್ಸಾಹಕ್ಕೆ ಮುಂದಾಗಿದೆ. ಸರ್ಕಾರ ವೆಬ್ ಆಧರಿತ ಪ್ಲಾಟ್ಫಾರ್ಮ್ ಸ್ಥಾಪನೆಗೆ ನಿರ್ಧರಿಸಿದ್ದು, ಅಲ್ಲಿ ರೈತ ಉತ್ಪಾದಕ ಸಂಸ್ಥೆಗಳು ತಮ್ಮ ಹೆಚ್ಚುವರಿ ಉತ್ಪನ್ನಗಳನ್ನು ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳ ಮಾರಾಟಕ್ಕೆ ನೋಂದಾಯಿಸಿ ಮಾರಾಟ ಮಾಡಬಹುದಾಗಿದೆ.
