ಬೆಂಗಳೂರು : ನಾವು ಜಾತಿಗಣತಿ ಸಮೀಕ್ಷೆಯನ್ನ ಯಾವುದೇ ಕಾರಣಕ್ಕೂ ಮುಂದೂಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ಬಿಜೆಪಿ ಅವರು ರಾಜಕೀಯ ಮಾಡುತ್ತಿದ್ದಾರೆ. ನಾವು ಜಾತಿಗಣತಿ ಸಮೀಕ್ಷೆಯನ್ನ ಯಾವುದೇ ಕಾರಣಕ್ಕೂ ಮುಂದೂಡಲ್ಲ, ಯಾಕೆ ಮುಂದೂಡಬೇಕು..? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಸೆ.22 ರಿಂದ ಜಾತಿ ಸಮೀಕ್ಷೆ ನಡೆಯಲಿದೆ. ಯಾವುದೇ ಕಾರಣಕ್ಕೂ ಇದನ್ನು ಹಿಂಪಡೆಯಲ್ಲ ಎಂದರು.ಜಾತಿಗಣತಿ ಸಮೀಕ್ಷೆ ಮುಂದೂಡುವಂತೆ ನಿರ್ದೇಶನ ಕೊಡಲು ಬರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಪ್ರತಾಪ್ ಸಿಂಹ ಆಕ್ರೋಶ
ರಾಜ್ಯ ಸರ್ಕಾರದ ಜಾತಿ ಗಣತಿ ಸಮೀಕ್ಷೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹಿಂದೂ ಸಮಾಜದ ಜಾತಿಗಳನ್ನು ಬಿಡಿ ಬಿಡಿಯಾಗಿ ಒಡೆದು ಅನ್ಯ ಧರ್ಮದ ಸಂಖ್ಯೆ ಹೆಚ್ಚು ತೋರಿಸುವ ಹಿನ್ನಾರವಿದು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ರಾಜ್ಯದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚು ತೋರಿಸಲು ಪ್ರಯತ್ನ ಮಾಡುತ್ತಿದ್ದಾರೆ. ಹಿಂದೂಗಳ ಜಾತಿಗಳನ್ನು ಒಡೆದು ರಾಜಕೀಯ ದುರುದ್ದೇಶಕ್ಕಾಗಿ ಜಾತಿ ಗಣತಿ ಸಮೀಕ್ಷೆ ನಡೆಸುತ್ತಿದ್ದಾರೆ. ಸಮಾಜದ ಸ್ವಾಮೀಜಿಗಳು ಈ ಬಗ್ಗೆ ಧ್ವನಿಯೆತ್ತಬೇಕು ಎಂದರು.ಬ್ರಾಹ್ಮಣ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಇಂತಹ ಸಮೀಕ್ಷೆಯನ್ನು ಒಪ್ಪಲು ಸಾಧ್ಯವಿಲ್ಲ. ಕಾನೂನು ಪದವೀಧರನಾಗಿ ಸಿಎಂ ಸಿದ್ದರಾಮಯ್ಯ ಇಂತಹ ಯತ್ನ ನಡೆಸಲು ಹೊರಟಿರುವುದು ತಪ್ಪು ಎಂಬ ಅರಿವು ಅವರಿಗೂ ಇದೆ. ಆದರೂ ರಾಜಕೀಯಕ್ಕಾಗಿ ಈ ದಾಳ ಉರುಳಿಸಿದ್ದಾರೆ. ಕುರ್ಚಿ ಭದ್ರಪಡಿಸಿಕೊಳ್ಳಲು ಸಿದ್ದರಾಮಯ್ಯ ಮಾಡುತ್ತಿರುವ ತಂತ್ರವಿದು ಎಂದು ಕಿಡಿಕಾರಿದ್ದಾರೆ.